ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ: ಪ್ರತಾಪ್‌ ಸಿಂಹ

ಮೈಸೂರು: ಲೋಕಸಭೆಯ ಒಳಗಡೆ ಹೊಗೆ ಬಾಂಬ್‌ ಸ್ಫೋಟ (Smoke Bomb Inside Lok Sabha) ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸಂಸದ ಪ್ರತಾಪ್‌ ಸಿಂಹ (MP Pratap Simha) ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳು ಕೇಳಿದ್ದಕ್ಕೆ ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ ಎಂದು ಮೂರು ಮೂರು ಬಾರಿ ಹೇಳಿ, ಆ ವಿಚಾರದಲ್ಲಿ ಯಾವುದೇ ವಿವರಣೆ ಕೊಡುವುದಿಲ್ಲ ಎಂದು ಉತ್ತರಿಸಿದರು.   ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೂ ಮುನ್ನ ಸಿಂಗಾರಗೊಳ್ಳಲಿದೆ ರಾಮನ ಮೆಟ್ಟಿಲು! – ಏನಿದರ ಮಹತ್ವ? ಈ ಹೆಸರು ಯಾಕೆ ಬಂತು?

 

ಪ್ರತಾಪ್ ಸಿಂಹ ದೇಶದ್ರೋಹಿನಾ ದೇಶಪ್ರೇಮಿನಾ ಅಂತಾ ಬೆಟ್ಟದ ಚಾಮುಂಡಿ ತಾಯಿ, ಕೊಡಗಿನ ಕಾವೇರಿ ತಾಯಿ. ನನ್ನ ಓದುಗರು, ಮೈಸೂರಿನ ಕೊಡಗು ಜನ ತೀರ್ಪು ನೀಡುತ್ತಾರೆ. ಮುಂಬರುವ ಚುನಾವಣೆಯಲ್ಲಿ ನಾನು ದೇಶಪ್ರೇಮಿನಾ, ದೇಶದ್ರೋಹಿನಾ ಎಂದು ಜನ ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ನಾನು ಇಷ್ಟೇ ಹೇಳುತ್ತೇನೆ. ಈ ಬಗ್ಗೆ ಬೇರೆ ಏನೂ ಕೇಳಬೇಡಿ ಎಂದರು.

ಸಿದ್ದರಾಮಯ್ಯ ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದಕ್ಕೆ ಕೇಳಿದ ಪ್ರಶ್ನೆಗೆ, ತಮ್ಮನ್ನು ಸಮರ್ಥಿಸಿಕೊಳ್ಳಲು ಸಿಎಂ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತಂದಿದ್ದಾರೆ. ಪ್ರಧಾನಿಯವರು ಸರ್ಕಾರದ ವಿಮಾನದಲ್ಲೇ ಓಡಾಡುತ್ತಾರೆ. ಖಾಸಗಿ ಜೆಟ್‌ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ ಪ್ರಧಾನಿ ಓಡಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ದೇಶಕ್ಕೆ ಒಬ್ಬರೇ ಪ್ರಧಾನಿ ಇರುವುದು. ದೇಶದಲ್ಲಿ 29 ಜನ ಮುಖ್ಯಮಂತ್ರಿಗಳಿದ್ದಾರೆ. ನೀವು ಸುಖಾ ಸುಮ್ಮನೆ ಪ್ರಧಾನಿಗೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳಬೇಡಿ. ಈ ರೀತಿ ಹೋಲಿಕೆ ಮಾಡಿಕೊಳ್ಳುವುದನ್ನು ಮೊದಲು ಬಿಡಿ ಎಂದು ಕಿಡಿಕಾರಿದರು.