ಡಿಸೆಂಬರ್ ಅಂತ್ಯದ ವೇಳೆ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣ: ಗೋವಿಂದ ಕಾರಜೋಳ

ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪರಿಶೀಲಿಸಿ, ಡಿಸೆಂಬರ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ನಗರದ ಸಿಬಿಟಿ ಕಾಮಗಾರಿ, ವಿವಿಧ ರಸ್ತೆಗಳು, ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್, ಟಿಳಕವಾಡಿಯ ಕಲಾಮಂದಿರ ಮತ್ತಿತರ ಕಾಮಗಾರಿಗಳನ್ನು ಕಾರಜೋಳ ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಸಿಬಿಟಿ 2018ರಲ್ಲಿ ಕಾಮಗಾರಿ ಆರಂಭವಾಗಿದೆ. ರಕ್ಷಣಾ ಇಲಾಖೆಯ ಜಾಗೆ ಇರುವುದರಿಂದ ಎನ್‍ಓಸಿ ಸಿಗದೇ ಒಂದು ವರ್ಷ ಕಾಮಗಾರಿ ವಿಳಂಬವಾಯಿತು. ಉದ್ದೇಶಿತ ನೂತನ ಸಿಬಿಟಿಯಲ್ಲಿ 28 ಬಸ್ ಪಾಕಿರ್ಂಗ್ ಫ್ಲ್ಯಾಟ್ ಫಾರ್ಮ್, ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಾರಿಗೆ ಸಂಸ್ಥೆಗೆ ವಾಣಿಜ್ಯ ಸಂಕೀರ್ಣ, ರೆಸ್ಟೋರೆಂಟ್ ಮತ್ತಿತರ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ವೀಕ್ಷಣೆ:
ಸಚಿವ ಗೋವಿಂದ ಕಾರಜೋಳ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‍ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು. 46ಕೋಟಿ ವೆಚ್ಚದಲ್ಲಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಿರ್ಮಿಸಲಾಗಿದೆ. ಬಸ್, ಆ್ಯಂಬ್ಯುಲೆನ್ಸ್ ಹಾಗೂ ತುರ್ತು ಸೇವೆಗೆ ವಾಹನಗಳ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ ಬಾಗೇವಾಡಿ ತಿಳಿಸಿದರು. ಇದನ್ನೂ ಓದಿ: ಮೊಬೈಲ್ ಟವರ್‌ಗಳಿಂದ ಅಪಾಯಕಾರಿ ವಿಕಿರಣ ಹೊರಹೊಮುತ್ತದೆ ಎನ್ನುವುದು ತಪ್ಪು ಕಲ್ಪನೆ: ರಾಕೇಶ್ ಕುಮಾರ್ ದುಬೇ

67 ನಗರ ಸಾರಿಗೆ ಬಸ್‍ಗಳಿಗೆ ಜಿಪಿಎಸ್, ಹತ್ತು ಬಸ್ ಶೆಲ್ಟರ್‍ಗಳಲ್ಲಿ ಕ್ಯಾಮೆರಾ, ನಗರದ ಸ್ಮಾರ್ಟ್ ಬಸ್ ಶೆಲ್ಟರ್‍ಗಳಲ್ಲಿ ಮಾಹಿತಿ ಫಲಕ ಅಳವಡಿಸಲಾಗಿದೆ. ಕಸ ಹಾಕುವವರ ಮೇಲೆ ನಿಗಾ ವಹಿಸಲು 20 ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಒಂಬತ್ತು ಸ್ಥಳಗಳಲ್ಲಿ ಸ್ಮಾರ್ಟ್ ಪೋಲ್ ಅಳವಡಿಸಲಾಗಿದೆ. 360 ಡಿಗ್ರಿ ಕ್ಯಾಮೆರಾ ರೊಟೇಟ್ ಆಗುತ್ತದೆ. ತುರ್ತು ಸಂದರ್ಭದಲ್ಲಿ ತಕ್ಷಣವೇ ಸಂಬಂಧಿಸಿದ ವರಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದರು.

ಡಿಸೆಂಬರ್‍ಗೆ ಪೂರ್ಣ:
ಇದೇ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಎರಡು ವರ್ಷಗಳಿಂದ ಕೋವಿಡ್ ಹಾಗೂ ಅತಿಯಾದ ಮಳೆಯಿಂದ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗಿವೆ. ಡಿಸೆಂಬರ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಟಿಳಕವಾಡಿಯಲ್ಲಿ 43.62 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಲಾಮಂದಿರ ಕಾಮಗಾರಿಯನ್ನು ವೀಕ್ಷಿಸಿದರು. ಕಾಮಗಾರಿ ಒಂದು ವರ್ಷ ವಿಳಂಬವಾಗಿದೆ. ಯೋಜನೆಯ ಸ್ವಲ್ಪ ಜಾಗೆಗೆ ಸಂಬಂಧಿಸಿದಂತೆ ಇರುವ ಕಾನೂನು ತೊಡಕು ನಿವಾರಿಸಿಕೊಂಡು ಮುಂದಿನ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು. ಇದನ್ನೂ ಓದಿ: ಉಕ್ರೇನಲ್ಲಿರುವ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರಲು ಸರ್ವಪ್ರಯತ್ನ: ಕಾರಜೋಳ

ಕಾಮಗಾರಿ ಪೂರ್ಣಗೊಂಡ ಬಳಿಕ ಇದರಿಂದ ಬರುವ ಆದಾಯದಲ್ಲಿ ಐದು ವರ್ಷಗಳಲ್ಲಿ ಯೋಜನಾ ವೆಚ್ಚ ಮರಳಿ ಬರಲಿದೆ. ಆದ್ದರಿಂದ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸಿದರು. ಕಲಾಮಂದಿರದ ವೈಶಿಷ್ಟ್ಯಗಳನ್ನು ಶಾಸಕ ಅಭಯ್ ಪಾಟೀಲ ಅವರು ಸಚಿವರಿಗೆ ವಿವರಿಸಿದರು.

Comments

Leave a Reply

Your email address will not be published. Required fields are marked *