ನಂದಿಗಿರಿಧಾಮದ ಪಕ್ಕದ ಸ್ಕಂದಗಿರಿ ಬೆಟ್ಟಕ್ಕೆ ಕಿಡಿಗೇಡಿಗಳಿಂದ ಬೆಂಕಿ

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ ಪಕ್ಕದ ಸ್ಕಂದಗಿರಿ ಬೆಟ್ಟದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಬೆಟ್ಟವನ್ನ ಆವರಿಸುತ್ತಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಸ್ಕಂದಗಿರಿ ಬೆಟ್ಟದ ತಪ್ಪಲಿನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು ಸದ್ಯ ಇಡೀ ಬೆಟ್ಟವನ್ನ ಆವರಿಸುತ್ತಿದೆ. ಅಂದಹಾಗೆ ಸ್ಕಂದಗಿರಿ ಟ್ರೆಕ್ಕಿಂಗ್ ಪ್ರಿಯರ ಹಾಟ್ ಫೇವರಿಟ್ ತಾಣವಾಗಿದ್ದು, ವಿಕೇಂಡ್ ಬಂದರೆ ಸಾಕು ಬೆಂಗಳೂರಿನ ಟೆಕ್ಕಿಗಳ ದಂಡೇ ಬೆಟ್ಟಕ್ಕೆ ಹರಿದುಬರುತ್ತೆ.

ಇಂತಹ ಸ್ಕಂದಗಿರಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಸಂಪೂರ್ಣ ಬೆಟ್ಟವನ್ನ ಆವರಿಸುವ ಆತಂಕ ತಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ತಪ್ಪಲಿನಿಂದ ಮೇಲ್ಭಾಗಕ್ಕೆ ಬೆಂಕಿ ಆವರಿಸುತ್ತಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಕಳೆದ ಎರಡು ಮೂರು ದಿನಗಳ ಹಿಂದೆ ಸಹ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದು ಕಿಡಿಗೇಡಿಗಳ ಕೃತ್ಯ ಇರಬೇಕು ಅಂತ ಅರಣ್ಯ ಇಲಾಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೇಸಿಗೆಯ ಆರಂಭದಲ್ಲೇ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಅರಣ್ಯ ಇಲಾಖೆಯವರಿಗೆ ತಲೆನೋವಾಗಿ ಪರಿಣಮಿಸಿದೆ.

Comments

Leave a Reply

Your email address will not be published. Required fields are marked *