ಮನ್ಸೂರ್‌ನಿಂದ 38 ಕೆಜಿ ಚಿನ್ನ ಕರಗಿಸಿದ 9 ಕೋಟಿ ಪಡೆದಿದ್ದ ಸ್ನೇಹಿತನಿಗೆ ನೋಟಿಸ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸದ್ಯ ಎಸ್‍ಐಟಿಯಿಂದ ಸಿಬಿಐಗೆ ವರ್ಗಾವಣೆ ಆಗಿದೆ. ಆದರೆ ಮನ್ಸೂರ್ ಖಾನ್ ಚಿನ್ನ ಕರಗಿಸಿ ಬರೋಬ್ಬರಿ 9 ಕೋಟಿ ರೂ. ಹಣವನ್ನು ಸ್ನೇಹಿತನಿಗೆ ಕೊಟ್ಟಿದ್ದು, ಈ ಬಗ್ಗೆ ತಿಳಿದ ಬಳಿಕ ಎಸ್‍ಐಟಿಯಿಂದ ಮನ್ಸೂರ್ ಸ್ನೇಹಿತನಿಗೆ ನೋಟಿಸ್ ನೀಡಲಾಗಿದೆ.

ಮನ್ಸೂರ್ ಖಾನ್ ಸ್ನೇಹಿತ ಅಬ್ಬಾಸ್‍ಗೆ ಎಸ್‍ಐಟಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ದೇಶ ಬಿಟ್ಟು ಹೋಗುವ ಮುನ್ನವೇ ಮನ್ಸೂರ್ ಖಾನ್ ದುಬೈನಲ್ಲಿ ವಾಸವಾಗಿರೋ ಅಬ್ಬಾಸ್‍ಗೆ 38 ಕೆಜಿ ಚಿನ್ನ ಕರಗಿಸಿ ಮಾರಾಟ ಮಾಡಿ, ಸುಮಾರು 9 ಕೋಟಿ ಹಣವನ್ನು ನೀಡಿದ್ದನು. ಹಣ ನೀಡಿದ ಬಳಿಕ ದುಬೈಗೆ ಮನ್ಸೂರ್ ಎಸ್ಕೇಪ್ ಆಗಿದ್ದನು ಎನ್ನಲಾಗಿದೆ.

ಹೀಗಾಗಿ ಎಸ್‍ಐಟಿ ಅಬ್ಬಾಸ್‍ಗೆ ನೋಟಿಸ್ ನೀಡಿದೆ. ನೋಟಿಸ್‍ಗೆ ಮಣಿದು ವಿಚಾರಣೆಗೆ ಅಬ್ಬಾಸ್ ಹಾಜರಾದರೆ ಎಸ್‍ಐಟಿ ಅಧಿಕಾರಿಗಳು ಆತನ ವಿಚಾರಣೆ ನಡೆಸುತ್ತಾರೆ, ಇಲ್ಲವಾದರೆ ಅಬ್ಬಾಸ್‍ನನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸೋ ಸಾಧ್ಯತೆಯಿದೆ. ಕೇವಲ ಎಸ್‍ಐಟಿ ಮಾತ್ರವಲ್ಲದೆ, ಇಡಿ ಅಧಿಕಾರಿಗಳಿಂದಲೂ ಅಬ್ಬಾಸ್‍ಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ನನ್ನು ಬಂಧಿಸಿ ತೀವ್ರ ವಿಚಾರಣೆ ಒಳಪಡಿಸಿದ ಬೆನ್ನಲ್ಲೇ ಎಸ್‍ಐಟಿ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದ್ದರು. ಬೆಂಗಳೂರಿನ ಶಾಂತಿನಗರದಲ್ಲಿರುವ ಮನ್ಸೂರ್ ಮನೆ ಮೇಲೆ ದಾಳಿ ನಡೆಸಿದ ವೇಳೆ 300 ಕೆ.ಜಿ ಚಿನ್ನದ ಬಿಸಕೆಟ್ ಗಳು ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

Comments

Leave a Reply

Your email address will not be published. Required fields are marked *