ಇಂದಿನಿಂದ 1 ತಿಂಗಳು ಸಿರ್ಸಿ ಮೇಲ್ಸೇತುವೆ ಬಂದ್

ಬೆಂಗಳೂರು: ಕೆ.ಆರ್ ಮಾರುಕಟ್ಟೆ ಬಳಿಯ ಅತಿಯಾದ ಸಂಚಾರ ದಟ್ಟಣೆ ಇರುವ ಸಿರ್ಸಿ ಮೇಲ್ಸೇತುವೆ (ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ) ಯಲ್ಲಿ ಇಂದಿನಿಂದ ದುರಸ್ತಿ ಕಾಮಗಾರಿ ನಡೆಯಲಿದೆ.

ಮೇಲ್ಸೇತುವೆಯ ಒಂದು ಭಾಗದ ರಸ್ತೆಯಲ್ಲಿ ಒಂದು ತಿಂಗಳು ರಸ್ತೆ ಸಂಚಾರ ಸ್ಥಗಿತವಾಗಿದೆ. ಒಟ್ಟು 2.65 ಉದ್ದದ ಮೇಲ್ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯಲಿದೆ. ಈ ಫ್ಲೈ ಓವರ್ ನ ಒಂದು ಭಾಗಕ್ಕೆ 5 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಡಾಂಬರೀಕರಣ ಆಗಿದ್ದು, ಇನ್ನೊಂದು ಭಾಗದ ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ.

ಮೈಸೂರು ರಸ್ತೆ ಮೇಲ್ಸೇತುವೆ ಮಾರ್ಗವಾಗಿ ರಾಯನ್ ವೃತ್ತದ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದರೂ ಸಂಚಾರ ದಟ್ಟಣೆ ಹೆಚ್ಚು ಇರಲಿದೆ. ಬೆಳಗ್ಗೆ 6ರಿಂದ 4 ಗಂಟೆವರೆಗೆ ಈ ಮೇಲ್ಸೇತುವೆ ಮೇಲೆ ಚಲಿಸುವ ವಾಹನಗಳು ಚಾಮರಾಜಪೇಟೆ ಮಾರ್ಗವಾಗಿ, ಬಿಬಿ ಜಂಕ್ಷನ್ ಮೈಸೂರು ರಸ್ತೆ ಮಾರ್ಗವಾಗಿ ಕೆಂಗೇರಿ-ಮೈಸೂರು ರಸ್ತೆ ಕಡೆಗೆ ಸಂಚರಿಸಲು ಮಾರ್ಗ ವ್ಯವಸ್ಥೆ ಮಾಡಲಾಗಿದೆ.

ಸುಮನಹಳ್ಳಿ ಮೇಲ್ಸೇತುವೆಯಲ್ಲೂ ದುರಸ್ತಿ ಕಾಮಗಾರಿ ನಡೆಸುತ್ತಿದ್ದು, ಮಾರ್ಗ ಬದಲಾವಣೆ ಮಾಡಿಲ್ಲ. ಒಟ್ಟಾರೆ ಇನ್ನೂ ಒಂದು ತಿಂಗಳು ಟ್ರಾಫಿಕ್ ಜಾಮ್ ಬಿಸಿ ವಾಹನ ಸವಾರರಿಗೆ ತಪ್ಪಿದ್ದಲ್ಲ.

Comments

Leave a Reply

Your email address will not be published. Required fields are marked *