ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

ಬೆಂಗಳೂರು: ಕೆಲ ದುಷ್ಕರ್ಮಿಗಳು ಕೆಆರ್ ಪುರ ಠಾಣೆ ವ್ಯಾಪ್ತಿಯ ಭಟ್ಟರಹಳ್ಳಿ ಮನೆಯೊಂದರ ಮುಂದಿದ್ದ ಹಸುವನ್ನು ಎಳೆದೊಯ್ದು, ನಿರ್ಮಾಣ ಹಂತದ ಮನೆಯಲ್ಲಿ ಕೂಡಿ ಹಾಕಿ, ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆ ಮಾಡಿದ್ದಾರೆ.

ಭಟ್ಟರಹಳ್ಳಿ ನಿವಾಸಿ ನಾರಾಯಣಪ್ಪ ಮೃತ ಹಸುವಿನ ಮಾಲೀಕ. ಎಂದಿನಂತೆ ಶನಿವಾರ ರಾತ್ರಿಯೂ ಹಸುವನ್ನು ಮನೆಯ ಹೊರಗೆ ಕಟ್ಟಲಾಗಿತ್ತು. ಆದರೆ ಇಂದು ಕೆಲ ದುಷ್ಕರ್ಮಿಗಳು ಹಸುವನ್ನು ಎಳೆದೊಯ್ದು ಹಲ್ಲೆ ಮಾಡಿ, ಕೊಲೆಗೈದು ಪರಾರಿಯಾಗಿದ್ದಾರೆ.

ಕೊಲೆ ಗೈದ ಮನೆಯು ನಿರ್ಜನ ಪ್ರದೇಶದಲ್ಲಿದ್ದು, ಇಲ್ಲಿಗೆ ಪ್ರತಿದಿನ ರಾತ್ರಿ ಸಮಯದಲ್ಲಿ ಅನೇಕ ಪುಂಡ ಪೋಕರಿಗಳು ಬೀಡಿ, ಸಿಗರೇಟ್, ಮದ್ಯ, ಗಾಂಜಾ ವ್ಯಸನಕ್ಕೆ ಬರುತ್ತಾರೆ. ಮದ್ಯದ ಅಮಲಿನಲ್ಲಿದ್ದವರೇ ಹಸುವನ್ನು ಎಳೆದುಕೊಂಡು ಬಂದು, ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಜೊತೆಗೆ ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಹಸುವನ್ನೇ ನಂಬಿಕೊಂಡು ನಾರಾಯಣಪ್ಪ ಅವರ ಕುಟುಂಬ ಜೀವನ ಸಾಗಿಸುತ್ತಿತ್ತು. ಹಾಲು ಕೊಡುತ್ತಿದ್ದ ಹಸುವನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರಿಂದ ದಿಕ್ಕು ತೋಚದಂತಾಗಿದ್ದು, ಬಡಕುಟುಂಬಕ್ಕೆ ಮುಂದಿನ ಜೀವನ ನಿರ್ವಹಣೆಗೆ ಕಷ್ಟದಾಯಕವಾಗಿದೆ.

Comments

Leave a Reply

Your email address will not be published. Required fields are marked *