ವಿಚ್ಛೇದನಕ್ಕೆ ಮುಂದಾದ ರಘು ದೀಕ್ಷಿತ್- ಮಯೂರಿ

ಬೆಂಗಳೂರು: ಖ್ಯಾತ ಗಾಯಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯುವುದಕ್ಕೆ ನಿರ್ಧರಿಸಿದ್ದಾರೆ.

ಕಳೆದ ಒಂದು ವರ್ಷದಿಂದ ರಘು ಮತ್ತು ಮಯೂರಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಇದೀಗ ಕೌಟುಂಬಿಕ ಕಲಹ ನ್ಯಾಯಾಲಯಕ್ಕೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ರಘು ದೀಕ್ಷಿತ್ ಮೇಲೆ ಮೀಟೂ ಆರೋಪ ಕೇಳಿ ಬಂದಾಗಲೇ ದಂಪತಿಯ ಮಧ್ಯೆ ಇದ್ದ ಮನಸ್ತಾಪ ಬಯಲಾಗಿತ್ತು. ಇದೀಗ ಜೋಡಿ ಬೇರೆಯಾಗಿರೋದು ಖಚಿತವಾಗಿದೆ.

ಸದ್ಯಕ್ಕೆ ನ್ಯಾಯಾಲಯ ದಂಪತಿಗೆ 6 ತಿಂಗಳ ಗಡುವು ನೀಡಿದ್ದು, ಡಿಸೆಂಬರ್ ನಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮೀಟೂ ಆರೋಪ:
ಗಾಯಕಿ ಚಿನ್ಮಯಿ ಶ್ರೀಪಾದ ಅವರು ರಘು ದೀಕ್ಷಿತ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಚಿನ್ಮಯ್ ತನ್ನ ಸ್ನೇಹಿತರಿಗೆ ಆದ ಅನುಭವಗಳನ್ನು 2 ಪತ್ರಗಳ ಮೂಲಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಈ ಆರೋಪ ಕೇಳಿಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿದ್ದ ಗಾಯಕ ರಘು ದೀಕ್ಷಿತ್, ಚಿನ್ಮಯಿ ಶ್ರೀಪಾದ್ ಕಾರ್ಯವನ್ನು ಶ್ಲಾಘಿಸಿದ್ದರು. ಆದರೆ ಅವರು ಹೇಳಿದ್ದರಲ್ಲಿ ಕೆಲ ಭಾಗ ನಿಜವಿದ್ದರೂ, ಎಲ್ಲವೂ ನಿಜವಲ್ಲ ಎಂದು ತಮ್ಮ ಟ್ವಿಟ್ಟರಿನಲ್ಲಿ ಪ್ರಕಟಿಸಿದ್ದರು. ನಾನು ಆಕೆಯನ್ನ ಹಗ್ ಮಾಡಿ ಕಿಸ್ ಮಾಡುವುದಕ್ಕೆ ಪ್ರಯತ್ನಿಸಿದ್ದು ನಿಜ, ಆದರೆ ಅದಕ್ಕೆ ನಾನು ಕ್ಷಮೆ ಕೂಡ ಕೇಳಿದ್ದೇನೆ. ಈಗಲೂ ಕ್ಷಮೆ ಕೇಳುತ್ತೇನೆ ಅಂದಿದ್ದರು.

ರಘು ದೀಕ್ಷಿತ್ ಬಗ್ಗೆ ಆರೋಪ ಬರುತ್ತಿದ್ದಂತೆಯೇ ಪತ್ನಿ ಮಯೂರಿ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದರು. “ಲೈಂಗಿಕ ಕಿರುಕುಳಕ್ಕೆ ಬಲಿಪಶುಗಳಾದ ಪರವಾಗಿ ನಾನು ಸದಾ ನಿಲ್ಲುತ್ತೇನೆ. ಅಲ್ಲದೆ ಸದಾ ನನ್ನ ಬೆಂಬಲವಿದೆ. ಇಂತಹ ಕಿರುಕುಳ ಆದಾಗ ಕಾನೂನು ಹೋರಾಟ ಮಾಡೋದು ಸೂಕ್ತ ಎನಿಸಿಸುತ್ತದೆ. ಯಾಕೆಂದರೆ ಆಗ ಇತರೆ ಮಹಿಳೆಯರ ಘನತೆಗೆ ಚ್ಯುತಿ ತರುವ ಧೈರ್ಯ ಪುರುಷರಿಗೆ ಬರಲ್ಲವೆಂದು ಅಂದುಕೊಂಡಿದ್ದೇನೆ” ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *