ಬಂಪರ್ ಬೆಲೆ ಟೈಮ್‌ನಲ್ಲೇ ರೇಷ್ಮೆ ಸೊಪ್ಪಿಗೆ ವಕ್ಕರಿಸಿದ ನುಸಿರೋಗ- ಬೆಳೆಗಾರರಿಗೆ ಸಂಕಷ್ಟ

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕು ರೇಷ್ಮೆ ನಗರಿ ಎಂಬ ಪ್ರಖ್ಯಾತಿ ಪಡೆದಿದ್ದು, ಜಿಲ್ಲೆಯ ಜನರ ಮುಖ್ಯ ಕಸುಬು ರೇಷ್ಮೆ ಸಾಕಾಣಿಕೆಯಾಗಿದೆ. ಆದರೆ ಇತ್ತೀಚೆಗೆ ರೇಷ್ಮೆ ಸೊಪ್ಪಿಗೆ ವಕ್ಕರಿಸಿರುವ ನುಸಿರೋಗ ರೇಷ್ಮೆ ಸಾಕಾಣಿಕೆದಾರರನ್ನು ಸಂಕಷ್ಟಕ್ಕೀಡು ಮಾಡಿದೆ.

ಹೌದು, ಈ ಬಾರಿ ಸುರಿದ ಬಾರಿ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ರೇಷ್ಮೆ ಸಾಕಾಣಿಕೆಯಿಂದ ಬರುತಿದ್ದ ಅಲ್ಪ ಸ್ವಲ್ಪ ಆದಾಯದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಯ್ಲಿಗೆ ಬಂದಿದ್ದ ರೇಷ್ಮೆ ಸೊಪ್ಪಿನಲ್ಲಿ ನುಸಿರೋಗ ಕಾಣಿಸಿಕೊಂಡಿದೆ. ಈ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ಸಹ ವಾಂತಿ ಮಾಡಿಕೊಂಡು ಸಾಯುತ್ತಿವೆ. ರೇಷ್ಮೆ ಸೊಪ್ಪಿಗೆ ನುಸಿರೋಗ ಭಾದೆಯಿಂದ ರೇಷ್ಮೆ ಬೆಳೆಯಲು ಆಗದೆ ಕೈಚೆಲ್ಲಿ ಕೂತಿದ್ದೇವೆ ಎಂದು ಯಲವಳ್ಳಿ ಗ್ರಾಮದ ರೈತ ಮಂಜುನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲರಿಗೂ ಮಾನಸಿಕ ಆರೋಗ್ಯದ ತಪಾಸಣೆ ಅಗತ್ಯ: ಸುಧಾಕರ್

ರೇಷ್ಮೆ ಸೊಪ್ಪಿಗೆ ಈ ರೀತಿಯ ರೋಗ ಹರಡಿರುವುದರಿಂದ ಜಿಲ್ಲೆಯಲ್ಲಿ ಎಲ್ಲಿಯೂ ಸೊಪ್ಪು ಸಿಗುತ್ತಿಲ್ಲ. ಅಲ್ಪ ಸ್ವಲ್ಪ ಇರುವ ಸೊಪ್ಪನ್ನು ಕೊಂಡುಕೊಳ್ಳೋಣ ಅಂತ ಹೋದರೆ ಬೆಲೆ ಜಾಸ್ತಿ. ರೇಷ್ಮೆ ಇಲಾಖೆ ಅಧಿಕಾರಿಗಳ ಬಳಿ ಪರಿಹಾರ ಕೇಳಿದರೆ, ಯಾವುದಾದರು ಒಂದು ಔಷಧ ಸಿಂಪಡಿಸಿ ಎನ್ನುತ್ತಾರೆ. ಔಷಧ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಇತ್ತ ಸೊಪ್ಪು ಸಿಗದೆ ರೇಷ್ಮೆ ಹುಳು ಸಾಕಾಣಿಕೆ ಮಾಡಲು ಆಗದೆ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಈಗ ರೇಷ್ಮೆ ಗೂಡಿಗೆ ಬಂಪರ್ ಬೆಲೆ ಇದೆ. ಈಗಲಾದರೂ ಚೆನ್ನಾಗಿ ರೇಷ್ಮೆ ಗೂಡು ಬೆಳೆಯೋಣ ಎಂದರೆ ನುಸಿರೋಗ ಕಾಟ. ರೇಷ್ಮೆ ಸಾಕಾಣಿಕೆ ಮಾಡೋದೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎನ್ನುತ್ತಾರೆ ರೈತ ಈರಣ್ಣ ಹಾಗೂ ನಾಗರಾಜ್. ಇದನ್ನೂ ಓದಿ: ಪಾಕಿಸ್ತಾನ‌, ಬಾಂಗ್ಲಾದೇಶದ ಉಸ್ತುವಾರಿ ನೀಡಲು ಆಗುವುದಿಲ್ಲ: ಸಚಿವ ಉಮೇಶ್‌ ಕತ್ತಿ

Comments

Leave a Reply

Your email address will not be published. Required fields are marked *