ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಹಾರಿದ್ದ ಸಿದ್ಧಾರ್ಥ್ – ಪ್ಯಾಂಟ್ ಕಿಸೆಯಲ್ಲಿತ್ತು ಫೋನ್

ಮಂಗಳೂರು: ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯಲ್ಲಿ ತನ್ನ ಫೋನಿನಲ್ಲಿ ಮಾತನಾಡಿಕೊಂಡು ಹೋದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮತ್ತೆ ಹಿಂದಿರುಗಿ ಬರಲೇ ಇಲ್ಲ. ಇಂದು ಪತ್ತೆಯಾದ ಅವರ ಮೃತದೇಹದ ಪ್ಯಾಂಟಿನ ಕಿಸೆಯಲ್ಲಿ ಮೊಬೈಲ್ ಸಿಕ್ಕಿದೆ.

ಸೋಮವಾರ ಕಾಣೆಯಾಗಿದ್ದ ಸಿದ್ಧಾರ್ಥ್ ಅವರು ಇಂದು ನೇತ್ರಾವತಿ ನದಿ ಸೇತುವೆಯ ಕೆಲ ದೂರದಲ್ಲಿರುವ ಹೊಯಿಗೆ ಬಜಾರ್ ಎಂಬಲ್ಲಿ ಮೀನುಗಾರರಿಗೆ ಶವವಾಗಿ ದೊರೆತಿದ್ದಾರೆ. ಇವರ ಮೃತದೇಹದ ಪ್ಯಾಂಟ್ ಕಿಸೆಯಲ್ಲಿ ನೋಕಿಯಾ ಕಂಪನಿಗೆ ಸೇರಿದ ಮೊಬೈಲ್ ಸಿಕ್ಕಿದ್ದು, ಆತ್ಮಹತ್ಯೆಗೂ ಮುನ್ನ ಅದೇ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಆಪ್ತರ ಜೊತೆ ಕರೆ ಮಾಡಿದ ಬಳಿಕ ಫೋನ್ ಸ್ವಿಚ್ಛ್ ಆಫ್ ಮಾಡಿ ನದಿಗೆ ಜಿಗಿದಿರಬಹುದು ಎಂದು ಶಂಕಿಸಲಾಗುತ್ತಿದೆ.

ಸದ್ಯ ಮೃತದೇಹದಲ್ಲಿನ ಗಾಯಗಳ ಬಗ್ಗೆ ಪೊಲೀಸರು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಆತ್ಮಹತ್ಯೆ ಮಾಡಿ 36 ಗಂಟೆ ಕಳೆದರೂ ಮುಖದಲ್ಲಿ ರಕ್ತ ಸೋರಿಕೆ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಮಧ್ಯೆ ಸಿದ್ಧಾರ್ಥ್ ಅವರು ಧರಿಸಿದ್ದ ಕಪ್ಪು ಬಣ್ಣದ ಟೀ ಶರ್ಟ್ ಇನ್ನೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೊಬೈಲ್ ಲೊಕೇಷನ್:
ಸಿದ್ಧಾರ್ಥ್ ಅವರು ಸೋಮವಾರ ಸಂಜೆ 6.30ರ ಸುಮಾರಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆಯಿಂದ ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರನ್ನು ವಿಚಾರಣೆಯನ್ನು ಪೊಲೀಸರು ನಡೆಸಿದ್ದರು. ಇತ್ತ ಸಿದ್ಧಾರ್ಥ್ ಮೊಬೈಲ್ ಲೊಕೇಷನ್ ಪರಿಶೀಲಿಸಿದಾಗ ಸೇತುವೆಯ ಮಧ್ಯಭಾಗದಲ್ಲಿ ಅವರ ಕೊನೆಯ ಮೊಬೈಲ್ ಲೊಕೇಷನ್ ಪತ್ತೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಬೆಳಗ್ಗೆ ತನಿಖೆ ನಡೆಸಲು ಆಗಮಿಸಿದ್ದ ಶ್ವಾನ ದಳದ ನಾಯಿ ಸಹ ಸೇತುವೆ ಮಧ್ಯಭಾಗದವರೆಗೆ ಬಂದಿತ್ತು. ಪೊಲೀಸ್ ವಿಚಾರಣೆ ವೇಳೆ ಡ್ರೈವರ್ ಬಸವರಾಜ್, ಸೋಮವಾರ ಸಂಜೆ ಹೊತ್ತಿನಲ್ಲಿ ಸೇತುವೆಯ ಬಳಿ ಕಾರನ್ನು ನಿಲ್ಲಿಸು ಎಂದು ಸಿದ್ಧಾರ್ಥ್ ಹೇಳಿದ್ದರು. ಕಾರಿನಿಂದ ಇಳಿದು ಸೇತುವೆಯ ಮೇಲೆ ಸಿದ್ದಾರ್ಥ್ ನಡೆದುಕೊಂಡು ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದರು. ಕೆಲ ನಿಮಿಷ ಕಳೆದರೂ ಅವರು ಬಾರದೇ ಇದ್ದಾಗ ಕರೆ ಮಾಡಿದ್ದೆ. ಈ ವೇಳೆ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *