ಲಕ್ಕಿ ಹೌಸ್‍ಗೆ ಮರಳಿದ ಸಿದ್ದರಾಮಯ್ಯ

ಬೆಂಗಳೂರು: ಕಳೆದ ಆರೂವರೆ ವರ್ಷದಿಂದ ವಾಸವಿದ್ದ ಕಾವೇರಿ ನಿವಾಸ ಖಾಲಿ ಮಾಡಿ ಹೊಸ ಸರ್ಕಾರಿ ಬಂಗಲೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಿಫ್ಟ್ ಆಗಿದ್ದಾರೆ. ಕುಮಾರ ಕೃಪ ಅನೆಕ್ಷ್ಚರ್ ಒನ್ ಸಿದ್ದರಾಮಯ್ಯ ಶಿಫ್ಟ್ ಆಗಿರುವ ಲಕ್ಕಿ ಹೌಸ್. ವಿಪಕ್ಷ ನಾಯಕರಾಗಿದ್ದಾಗ 4 ವರ್ಷಗಳ ಕಾಲ ಇದೇ ನಿವಾಸದಲ್ಲಿ ಸಿದ್ದರಾಮಯ್ಯ ವಾಸವಾಗಿದ್ದರು. ಈ ನಿವಾಸದಲ್ಲಿದ್ದಾಗಲೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಸಿಎಂ ಆದ ನಂತರ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಿದ್ದರು.

ಕಾವೇರಿ ನಿವಾಸಕ್ಕೆ ಸಿಎಂ ಯಡಿಯೂರಪ್ಪ ಬರಲು ತೀರ್ಮಾನಿಸಿದ ನಂತರ ಸಿದ್ದರಾಮಯ್ಯ ಗೆ ಕುಮಾರಕೃಪ ನಿವಾಸ ಎಂದ ನಿಗದಿ ಮಾಡಲಾಗಿತ್ತು. ಆದರೆ ಈ ನಿವಾಸದಲ್ಲಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮನೆ ಖಾಲಿ ಮಾಡಲು ತಡ ಮಾಡಿದ್ದರು. ಅತ್ತ ಕಾವೇರಿ ನಿವಾಸ ಬದಲಿಸಲು ಮನಸಿಲ್ಲದ ಸಿದ್ದರಾಮಯ್ಯ ಸಹ ಸತಾಯಿಸಿದ್ದರು. ಲೋಕೋಪಯೋಗಿ ಅಧಿಕಾರಿಗಳು ಸಿದ್ದರಾಮಯ್ಯ ನಿವಾಸದ ಬೋರ್ಡ್ ಕಿತ್ತು ಹಾಕಿದ್ದು ವಿವಾದವಾಗಿತ್ತು.

ವಿಪಕ್ಷ ನಾಯಕರಾಗಿ ಹೋಗಿದ್ದ ನೀವು ಅದೇ ಲಕ್ಕಿ ನಿವಾಸದಿಂದಾಗಿ ಸಿಎಂ ಆಗಿದ್ದೀರಿ. ಈಗ ಅದೇ ನಿವಾಸಕ್ಕೆ ಶಿಫ್ಟ್ ಆದರೆ ಪುನಃ ಅದೃಷ್ಟ ಒಲಿಯಬಹುದು ಎಂದು ಸಿದ್ದರಾಮಯ್ಯರನ್ನು ಆಪ್ತರು ಒತ್ತಾಯಿಸಿದ್ದರು ಎನ್ನಲಾಗಿದೆ. ಹೀಗಾಗಿ ಕುಟುಂಬ ಮತ್ತು ಆಪ್ತರ ಒತ್ತಾಯದ ಮೇರೆಗೆ ಸಿದ್ದರಾಮಯ್ಯನವರು ಕುಮಾರಕೃಪಾಕ್ಕೆ ಶಿಫ್ಟ್ ಆಗಿದ್ದಾರೆ. ಇಂದು ಬೆಳಗ್ಗೆಯೇ ಸಿದ್ದರಾಮಯ್ಯನವರ ಪತ್ನಿ ಕುಮಾರಕೃಪಾದಲ್ಲಿ ವಿಶೇಷ ಪೂಜೆಯನ್ನು ಸಹ ಮಾಡಿಸಿದ್ದಾರೆ.

Comments

Leave a Reply

Your email address will not be published. Required fields are marked *