ಇನ್ನೂ ಬಿಜೆಪಿ ಪಾತ್ರ ಇಲ್ವಾ? – ಟ್ವೀಟ್ ಮಾಡಿ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ನಗರದಲ್ಲಿ ರಾಜ್ಯಪಾಲರು ಹಾಗೂ ಮುಂಬೈನಲ್ಲಿ ಹೋಟೆಲ್ ಪ್ರವೇಶ ಮಾಡಲು ಅವಕಾಶ ನೀಡುತ್ತಿಲ್ಲ. ಈಗಲೂ ಇದರಲ್ಲಿ ಬಿಜೆಪಿ ಪಾತ್ರ ಇಲ್ವಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಕರ್ನಾಟಕ ಹಾಗೂ ಕೇಂದ್ರ ಬಿಜೆಪಿ ಟ್ವಿಟ್ಟರ್ ಖಾತೆಗಳಿಗೆ ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಕರ್ನಾಟಕದಲ್ಲಿ ರಾಜ್ಯಪಾಲರ ಭೇಟಿ ಮಾಡಲು ನಮಗೆ ಅವಕಾಶ ನೀಡುತ್ತಿಲ್ಲ. ಮುಂಬೈನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಹೋಟೆಲ್ ಪ್ರವೇಶ ಮಾಡಲು ಅವಕಾಶ ನೀಡುತ್ತಿಲ್ಲ. ಇದರ ನಂತರವೂ ಕಾಂಗ್ರೆಸ್ ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಬಿಜೆಪಿ ಪಾತ್ರ ಇಲ್ಲ ಎಂದರೆ ಯಾರಾದರೂ ನಂಬ್ತಾರಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿ ಮೋದಿ ವಿರುದ್ಧ ಕಿಡಿಕಾರಿದ್ದ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿರ ಸರ್ವಾಧಿಕಾರ, ಸ್ವಾಭಿಮಾನಿ ಕರ್ನಾಟಕದಲ್ಲಿ ನಡೆಯುವುದಿಲ್ಲ. ಅಡ್ಡಹಾದಿಯ ಮೂಲಕ, ಹಣದ ಥೈಲಿ ಹಿರಿದುಕೊಂಡು ಅಧಿಕಾರಕ್ಕೆ ಬರುವ ಹುಚ್ಚು ಕನಸನ್ನು ನನಸು ಮಾಡಲು ನಾವು ಬಿಡುವುದಿಲ್ಲ. ನಮ್ಮ ಹೋರಾಟ ರಾಜ್ಯಾದ್ಯಂತ ಮುಂದುವರಿಯಲಿದೆ ಟ್ವೀಟ್ ಮಾಡಿ ಎಚ್ಚರಿಕೆ ರವಾನಿಸಿದ್ದರು.

ರಾಜ್ಯಪಾಲರೇ ನೀವು ಇಡೀ ರಾಜ್ಯ ಮತ್ತು ಎಲ್ಲ ಪಕ್ಷಗಳಿಗೂ ಸೇರಿದವರು. ಆದರೂ ನಿಮ್ಮ ಭೇಟಿಗೆ ಕಾಂಗ್ರೆಸ್ ಗೆ ಅವಕಾಶ ಸಿಕ್ತಿಲ್ಲ. ದಯಮಾಡಿ ಕೂಡಲೇ ನಮಗೆ ನಿಮ್ಮ ಭೇಟಿಗೆ ಅವಕಾಶ ನೀಡಿ. ರಾಜ್ಯದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ಬಗ್ಗೆ ನಿಮಗೆ ನಾವು ತಿಳಿಸಬೇಕು. ಪೊಲೀಸರು ನಿಮ್ಮ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಪೊಲೀಸರ ಈ ಧೋರಣೆ ಸ್ವಯಂ ನಿರ್ಧಾರವೇ ಅಥವಾ ನಿಮ್ಮ ಸೂಚನೆ ಮೇರೆಗೆ ಪೊಲೀಸರು ರೀತಿ ನಡೆದುಕೊಳ್ತೊದ್ದಾರಾ? ಎಂದು ಬರೆದುಕೊಂಡು ರಾಜ್ಯಪಾಲರ ಭೇಟಿಗೆ ಅವಕಾಶ ಸಿಕ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *