ಅಧ್ಯಕ್ಷ ಸ್ಥಾನದ ಹೊಸ್ತಿಲಲ್ಲಿ ಡಿಕೆಶಿಗೆ ಸಿದ್ದರಾಮಯ್ಯ ಅಡ್ಡಗಾಲು?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಣ ಸ್ಥಾನಕ್ಕೆ ಬಹುತೇಕ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಹೆಸರು ಅಂತಿಮವಾದ ಬೆನ್ನಲ್ಲೇ ಹೊಸ ಸಮಸ್ಯೆಯೊಂದು ಎದುರಾಗಿದೆ. ಡಿಕೆಶಿಯಂತಹ ಪವರ್ ಫುಲ್ ನಾಯಕ ಕೆಪಿಸಿಸಿ ಗೆ ಬಂದು ಕುಳಿತರೆ ತಮ್ಮ ಆಟ ನಡೆಯೋಲ್ಲ ಅಂತ ಮಾಜಿ ಸಿಎಂ ಸಿದ್ಧರಾಮಯ್ಯ ತೆರೆಮರೆಯ ಆಟ ಶುರುಮಾಡಿದ್ದಾರೆ ಎನ್ನುವ ವಿಚಾರ ಈಗ ಹರಿದಾಡತೊಡಗಿದೆ.

ಕಡೆಗಳಿಗೆಯಲ್ಲಿ ಎಂ.ಬಿ.ಪಾಟೀಲ್ ಹೆಸರನ್ನು ರೇಸಿಗೆ ತಂದಿದ್ದಾರೆ ಸಿದ್ದರಾಮಯ್ಯ. ದೆಹಲಿ ಮಟ್ಟದಲ್ಲಿ ಕಡೆ ಗಳಿಗೆಯಲ್ಲಿ ಎಂ.ಬಿ.ಪಾಟೀಲ್ ಹೆಸರು ರೇಸ್ ಗೆ ಬರುವಂತೆ ಮಾಡಲು ತಮ್ಮ ಪರವಿರುವ ಹೈ ಕಮಾಂಡ್ ಮಟ್ಟದ ನಾಯಕರ ಮೇಲೆ ಒತ್ತಡ ತರಲು ಮುಂದಾಗಿದ್ದಾರೆ. ಒಕ್ಕಲಿಗ ಸಮುದಾಯದ ಡಿಕೆಶಿಗೆ ಫೈಟ್ ಕೊಡಬೇಕಾದರೆ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಸೂಕ್ತ ಎಂದು ಭಾವಿಸಿರುವ ಸಿದ್ದರಾಮಯ್ಯ ಕೆಪಿಸಿಸಿ ಪಟ್ಟದ ರೇಸ್ ಗೆ ಎಂ.ಬಿ.ಪಾಟೀಲ್‍ರ ಹೆಸರು ಬರುವಂತೆ ನೋಡಿಕೊಂಡಿದ್ದಾರೆ.

ಪ್ರಬಲ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಹೆಸರನ್ನ ಹೈ ಕಮಾಂಡ್ ಅಷ್ಟು ಸುಲಭಕ್ಕೆ ಕಡೆಗಣಿಸಲ್ಲ ಅನ್ನೋದು ಸಿದ್ದರಾಮಯ್ಯ ಲೆಕ್ಕಾಚಾರ. ತಮ್ಮ ಬೆಂಬಲಿಗ ಎಂ.ಬಿ.ಪಾಟೀಲ್ ಕೆಪಿಸಿಸಿ ಅಧ್ಯಕ್ಷರಾದರೆ ಪರೋಕ್ಷವಾಗಿ ಪಕ್ಷದ ಹಿಡಿತ ತಮ್ಮ ಕೈಯಲ್ಲೆ ಇರುತ್ತದೆ ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ ಸಿದ್ದರಾಮಯ್ಯ.

ಈ ದಾಳ ಉರುಳಿಸುವ ಹಿಂದೆ ಪ್ರಬಲ ವಾದವೊಂದನ್ನು ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ. ಲಿಂಗಾಯತ ಸಮುದಾಯದ ಮುಖ್ಯಮಂತ್ರಿ ಯಡಿಯೂರಪ್ಪರ ಆಡಳಿತ ನಂತರ ಆ ಸಮುದಾಯವನ್ನ ಕಾಂಗ್ರೆಸ್ ನತ್ತ ಸೆಳೆಯಲು ಇದು ಅನುಕೂಲಕರವಾಗಲಿದೆ ಎನ್ನುವ ವಾದ ಮುಂದಿಟ್ಟಿದ್ದಾರೆ. ಆದ್ದರಿಂದ ಟ್ರಬಲ್ ಶೂಟರ್ ಡಿಕೆಶಿಗೆ ಕಡೆ ಗಳಿಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಗಾಲು ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಕುರ್ಚಿ ಗಲಾಟೆಯಲ್ಲಿ ಸಿದ್ದರಾಮಯ್ಯ ಕೈ ಮೇಲಾಗುತ್ತಾ? ಡಿಕೆಶಿ ಕೈ ಮೇಲಾಗುತ್ತಾ ಅನ್ನೋದೆ ಸದ್ಯದ ಕುತೂಹಲ.

Comments

Leave a Reply

Your email address will not be published. Required fields are marked *