ಸಿಎಂ ‘ಪಂಚ್’ತಂತ್ರಕ್ಕೆ ಪ್ರತ್ಯಸ್ತ್ರ-ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಚದುರಂಗದಾಟ

ಬೆಂಗಳೂರು: ಕಾಂಗ್ರೆಸ್ ಮುಖಂಡರ ವಿರುದ್ಧವೇ ಸಿಎಂ ಪಂಚ್‍ತಂತ್ರ ದಾಳ ಉರುಳಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿವೆ. ಈ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಪಂಚ್‍ತಂತ್ರಕ್ಕೆ ತಿರುಗುಬಾಣವನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮಂಡ್ಯ ಕ್ಷೇತ್ರದ ರೆಬಲ್ ಕೈ ಮುಖಂಡರು ಸುಮಲತಾ ಅಂಬರೀಶ್ ಜೊತೆ ಸಭೆ ನಡೆಸಿದ ವಿಡಿಯೋ ಲೀಕ್ ಆಗಿದ್ದಕ್ಕೆ ತಿರುಗೇಟು ನೀಡಲು ಸಿದ್ದರಾಮಯ್ಯ ಮೆಗಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ನಾಯಕರ ಕೆಲಸದ ವೈಖರಿಯ ಮಾಹಿತಿಯನ್ನು ಸಿದ್ದರಾಮಯ್ಯರು ತರಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಬಂದಾಗ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದ ಸ್ಥಳೀಯ ಮುಖಂಡರು ಇದೀಗ ಸಚಿವ ಜಿ.ಟಿ.ದೇವೇಗೌಡರಿಗೆ ಆಪ್ತರಾಗಿದ್ದಾರಂತೆ. ಹಾಗಾಗಿ ಜಿ.ಟಿ.ದೇವೇಗೌಡರೇ ಸ್ವಕ್ಷೇತ್ರ ಧರ್ಮ ಪಾಲಿಸಿಲ್ಲ ಎಂದು ತಿರುಗೇಟು ನೀಡಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಪಂಚಕರ್ಮ ಚಿಕಿತ್ಸೆಯ ಬಳಿಕ ‘ಕೈ’ ಮುಖಂಡರ ವಿರುದ್ಧ ಸಿಎಂ ‘ಪಂಚತಂತ್ರ’ದ ಬಲೆ

ಮಂಡ್ಯದಲ್ಲಿ ಮೈತ್ರಿ ಪಾಲನೆ ಆಗಿಲ್ಲ ಎಂದು ದಳಪತಿಗಳು ಆರೋಪಿಸಿದರೆ, ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನಾಯಕರ ನಡೆಯನ್ನು ಪ್ರಶ್ನಿಸಲು ಕಾಂಗ್ರೆಸ್ ಸಿದ್ಧಗೊಂಡಿದೆ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‍ನಿಂದಲೇ ಮೈತ್ರಿ ಪಾಲನೆಯಾಗಿಲ್ಲ ಎಂಬ ಅಸ್ತ್ರವನ್ನೇ ಸಿದ್ದರಾಮಯ್ಯ ಪ್ರಯೋಗಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ಅವರಿಗೆ ಹಿನ್ನಡೆಯಾದರೆ ಈ ವಿಚಾರವನ್ನು ಮುಂದಿಟ್ಟುಕೊಂಡು ದಳ ನಾಯಕರಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *