ಎಲ್ಲವೂ ಹಳೆಯದು, ಹೊಸದೇನಿಲ್ಲ, ಹೊರಟು ಹೋಗಿ – ಮಾಧ್ಯಮಗಳ ಮೇಲೆ ಮಾಜಿ ಸಿಎಂ ಗರಂ

ಬಾಗಲಕೋಟೆ: ಕಾಂಗ್ರೆಸ್ ಜೆಡಿಎಸ್ ಸರ್ಕಾರದಲ್ಲಿನ ಅಸಮಾಧಾನ ಕುರಿತ ಪ್ರಶ್ನೆಯನ್ನು ಕೇಳಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧವೇ ಗರಂ ಆಗಿದ್ದಾರೆ.

ಬಾದಾಮಿ ಕ್ಷೇತ್ರದಲ್ಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯನವರಿಗೆ ಮಾಧ್ಯಮದವರು ಪಕ್ಷದಲ್ಲಿನ ಅಸಮಾಧಾನ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ “ನೋ ರಿಯಾಕ್ಷನ್” ಎಂದು ಉತ್ತರಿಸಿ ಕೈ ಮುಗಿದರು.

ಈ ವೇಳೆ ಪತ್ರಕರ್ತರು ಮತ್ತೊಮ್ಮೆ ಹೈಕಮಾಂಡ್ ದೆಹಲಿಗೆ ಬರುವಂತೆ ಬರಲು ನಿಮಗೆ ಬುಲಾವ್ ಬಂದಿದ್ಯಾ ಎಂದು ಮರು ಪ್ರಶ್ನೆ ಹಾಕಿದಾಗ ಸಿದ್ದರಾಮಯ್ಯ, ಕ್ಷೇತ್ರದಲ್ಲಿ ಇನ್ನು ಎರಡು ದಿನ ಪ್ರವಾಸ ಮಾಡುವುದಾಗಿ ನಾನೇ ಹೇಳುತ್ತಿದ್ದೇನೆ. ಆದರೂ ನೀವು ಪದೇ ಪದೇ ಅದೇ ಪ್ರಶ್ನೆ ಮಾಡುತ್ತೀರಿ. ಎಲ್ಲವೂ ಹಳೆಯದು, ಹೊಸದೇನಿಲ್ಲ ನೀವು ಹೊರಟು ಹೋಗಿ. ನಾನು ದೆಹಲಿಗೂ ಹೋಗಲ್ಲ, ಎಲ್ಲಿಗೂ ಹೋಗಲ್ಲ. ನಾಳೆ, ನಾಡಿದ್ದು ಇಲ್ಲಿಯೇ ಇದ್ದು ಕೃತಜ್ಞತಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಗರಂ ಆಗಿಯೇ ಉತ್ತರಿಸಿದರು.

ಕ್ಷೇತ್ರ ಪ್ರವಾಸದ ಮೂರನೇ ದಿನದಂದು ಹಲವು ಗ್ರಾಮಗಳಿಗೆ ಭೇಟಿ ನೀಡಿದ ಅವರು ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಸ್ಥಾನ ನೀಡುವುದಾಗಿ ತಿಳಿಸಿದರು. ಈ ವೇಳೆ ಕ್ಷೇತ್ರದ ಜನತೆ ಕುರಿತು ಮಾತನಾಡಿದ ಅವರು, ನಾನು ದೂರ ಊರಿನವನೆಂದು ಯಾರೂ ಭಾವಿಸಿಕೊಳ್ಳಬೇಡಿ, ಬಾದಾಮಿಯಲ್ಲೇ ಮನೆ ಹಾಗೂ ಕಛೇರಿ ಮಾಡುತ್ತೇನೆ. ಯಾರೂ ಸಂಕೋಚ ಪಟ್ಟುಕೊಳ್ಳದೇ, ಓಟ್ ಹಾಕಿದವರು ಹಾಕದೇ ಇರುವವರು ಸಹ ಬರಬಹುದು ಎಂದರು.

ಪ್ರವಾಸದ ಮಧ್ಯೆಯೇ ವಿಜಯಪುರದ ಹಲವು ಕುರುಬ ಸಮಾಜದ ಮುಖಂಡರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶುಕ್ರವಾರವೂ ಸಹ ಹಲವು ಮುಖಂಡರು ಬಾದಾಮಿಗೆ ಆಗಮಿಸಿ ಸಿದ್ದರಾಮಯ್ಯ ಅವರು ವಾಸ್ತವ್ಯ ಮಾಡಿದ್ದ ಹೋಟೆಲ್ ನಲ್ಲೇ ಚರ್ಚೆ ನಡೆಸಿದ್ದರು. ಇಂದು ಕಾರಿನಲ್ಲಿ ಪ್ರಯಾಣಿಸುವಾಗ ಸಿದ್ದರಾಮಯ್ಯ ಹೆಚ್ಚಾಗಿ ಮೊಬೈಲ್ ಫೋನ್ ಮೂಲಕ ಸಂಭಾಷಣೆಯಲ್ಲೇ ನಿರತರಾಗಿದ್ದರು.

Comments

Leave a Reply

Your email address will not be published. Required fields are marked *