ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

ತುಮಕೂರು: ಸಿದ್ದಗಂಗಾ ಶ್ರೀ ಶಿವೈಕ್ಯಗೊಂಡ ಹಿನ್ನಲೆಯಲ್ಲಿ ಮಠದ ಮಕ್ಕಳು ಶ್ರೀಗಳು ಇಲ್ಲದ ರಾತ್ರಿಯನ್ನು ಕಳೆದಿದ್ದಾರೆ. ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿರುವ ದೃಶ್ಯ ಮನಕಲುಕುವಂತೆ ಇತ್ತು.

ಸೋಮವಾರ ಶ್ರೀಗಳು ಶಿವೈಕ್ಯ ವಿಚಾರ ತಿಳಿದು ಮಕ್ಕಳು ಭಾವುಕರಾಗಿದ್ದರು. ಸಿದ್ದಗಂಗಾ ಮಠದಲ್ಲೇ ಮಕ್ಕಳು ರಾತ್ರಿಯನ್ನು ಕಳೆದಿದ್ದಾರೆ. ಅಲ್ಲದೇ ಮಠದಲ್ಲೇ ಸಾವಿರಾರು ಭಕ್ತರು ಮಲಗಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಶ್ರೀಗಳ ದರ್ಶನಕ್ಕೆ ಬಂದ ಭಕ್ತರು ಹೊಸ ಮಠದ ಆವರಣ ಸೇರಿದಂತೆ ಹಲವೆಡೆ ಮಲಗಿದ್ದರು.

ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಹಾಸ್ಟೆಲ್ ಆವರಣದೊಳಗೆ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ. ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಶ್ರೀಗಳು ಮಠದ ಆವರಣದಲ್ಲಿ ಅನೇಕ ಬೀದಿನಾಯಿಗಳಿಗೆ ಖುದ್ದು ಆಹಾರ ನೀಡುತ್ತಿದ್ದರು. ಇಂದು ವಿದ್ಯಾರ್ಥಿಗಳ ಪ್ರಾರ್ಥನೆಯ ಸಮಯದಲ್ಲಿ ಶಾಲಾ ಅವರಣದಲ್ಲಿ ನಾಯಿಯೊಂದು ಮಲಗಿದ್ದ ದೃಶ್ಯ ಕಂಡುಬಂತು.

ಪ್ರತಿದಿನ ಬೆಳಗ್ಗೆ ಶಿವಕುಮಾರ ಸ್ವಾಮಿಜಿಗಳೇ ಮಕ್ಕಳಿಗೆ ಪ್ರಾರ್ಥನೆ ಹೇಳಿಕೊಡುತ್ತಿದ್ದರು. ಆದರೆ ಈಗ ಅವರ ಅಗಲಿಕೆಯಿಂದಾಗಿ ಮಕ್ಕಳು ಗೋಸಲ ಸಿದ್ದೇಶ್ವರ ವೇದಿಕೆ ಮುಂದೆ ಪ್ರಾರ್ಥನೆ ಮಾಡುತ್ತಿದ್ದಾರೆ. ಶಾಲಾ ಮಕ್ಕಳು ಶ್ರೀಗಳನ್ನು ನೆನೆದು ಬೆಳಗಿನ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೋಮವಾರ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವಿಷಯ ತಿಳಿದು ಮಠದ ಮಕ್ಕಳು ಬಿಕ್ಕಳಿಸಿ ಸುಡುಬಿಸಿಲಿನಲ್ಲಿಯೇ ನಿಂತು ಅಳುತ್ತಿದ್ದರು.

ಶ್ರೀಗಳು ತಮ್ಮ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ತಾವು ಮೃತಪಟ್ಟರೆ ಮಕ್ಕಳು ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಬಳಿಕವಷ್ಟೇ ಘೋಷಣೆ ಮಾಡಬೇಕು. ಯಾಕಂದ್ರೆ ಅವರು ಹಸಿವಿನಿಂದ ಇರುವುದು ತಮಗೆ ಇಷ್ಟವಿಲ್ಲ ಎಂದು ಮಠದ ಸಿಬ್ಬಂದಿ ಬಳಿ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು. ಹಾಗಾಗಿ ಸೋಮವಾರ ಶ್ರೀಗಳು ಬೆಳಗ್ಗೆ 11.44ಕ್ಕೆ ಶಿವೈಕ್ಯರಾದ್ರೂ ಮಠದ ಸಿಬ್ಬಂದಿ, ಮಕ್ಕಳು ಊಟ ಮಾಡಿದ ಮೇಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅಂದರೆ ಸುಮಾರು ಮಧ್ಯಾಹ್ನ 1.56ಕ್ಕೆ ವೈದ್ಯರು ಶ್ರೀಗಳು ಸಾವಿನ ವಿಚಾರವನ್ನು ಘೋಷಣೆ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *