ಹರಕೆ ತೀರಿಸಲು ಕೊಲ್ಲೂರಿಗೆ ಆಗಮಿಸಿದ ಲಂಕಾ ಪ್ರಧಾನಿ

ಉಡುಪಿ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.

ಬೆಳಗ್ಗೆಯೇ ನೂರಾರು ಭಕ್ತರು ದೇವರ ದರ್ಶನ ಪೂಜೆ ಕೈಗೊಂಡರು. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಆಗಮನ ಹಿನ್ನೆಲೆಯಲ್ಲಿ ಕೊಲ್ಲೂರು ದೇವಳದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಾರತೀಯ ಸೇನೆ ಲಂಕಾ ಪ್ರಧಾನಿಗೆ ಭದ್ರತೆ ಕೊಟ್ಟಿದೆ. ದೇವಸ್ಥಾನ ಭದ್ರತೆಯ ಮೇಲೂ ನಿಗಾ ವಹಿಸಿದೆ. ಲಂಕಾ ಪ್ರಧಾನಿ ದೇವಳ ಭೇಟಿ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ.

ಕೊಲಂಬೋ ಟು ಕೊಲ್ಲೂರು:
ಕೊಲಂಬೋದಿಂದ ಬೆಂಗಳೂರಿಗೆ ಬಂದಿರುವ ಸಿಂಘೆ, ಅಲ್ಲಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದಾರೆ. ಹೆಲಿಕಾಪ್ಟರ್ ಮೂಲಕ ಲಂಕಾ ಪ್ರಧಾನಿ ಬೈಂದೂರು ತಾಲೂಕಿನ ಅರೆ ಶೀರೂರಿಗೆ ಬಂದಿಳಿಯಬೇಕಿತ್ತು. ಉಡುಪಿಯಲ್ಲಿ ಬೆಳಗ್ಗೆಯಿಂದ ಧಾರಾಕಾರ ಮಳೆ. ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ಹೀಗಾಗಿ ರಸ್ತೆ ಮೂಲಕ ಕೊಲ್ಲೂರಿಗೆ ತೆರಳುವಂತೆ ಸೂಚಿಸಿದ್ದಾರೆ. ಮಂಗಳೂರಿಂದ ಕೊಲ್ಲೂರು ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 130 ಕೀ.ಮಿ. ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡಲಿದ್ದಾರೆ.

ಈ ನಡುವೆ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನವಚಂಡಿಕಾ ಯಾಗ ಆರಂಭವಾಗಿದ್ದು, ದೇವಸ್ಥಾನದ ಋತ್ವಿಜರಿಂದ ಹೋಮದ ವಿಧಿ ವಿಧಾನ ನಡೆದಿದೆ. ವಿಶೇಷ ಪೂಜೆಯ ಜೊತೆ ಯಜ್ಞಶಾಲೆಯಲ್ಲಿ ಹೋಮ ಆರಂಭವಾಗಿದೆ. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಮಧ್ಯಾಹ್ನ 12.30 ರ ಸುಮಾರಿಗೆ ನಡೆಯಲಿರುವ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲಂಕಾ ಪ್ರಧಾನಿ ನವಚಂಡಿಕಾಯಾಗದ ಹರಕೆಯನ್ನು ಈ ಹಿಂದೆಯೇ ಹೇಳಿದ್ದರು.

Comments

Leave a Reply

Your email address will not be published. Required fields are marked *