ಐಎಂಎ ಮನ್ಸೂರ್‌ಗೆ ಭಯೋತ್ಪಾದಕರ ಜೊತೆ ನಂಟಿದೆ – ಶೋಭಾ ಕರಂದ್ಲಾಜೆ ಗಂಭೀರ ಆರೋಪ

ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಪರಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಹೊಸ ಬಾಂಬ್ ಸಿಡಿಸಿದ್ದು, ಮೊಹಮದ್ ಮನ್ಸೂರ್ ಗೆ ಭಯೋತ್ಪಾದಕರೊಂದಿಗೆ ನಂಟಿದೆ ಎಂಬ ಅನುಮಾನ ಇದ್ದು, ಈ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಎಂಎ ಸಂಸ್ಥೆಗೆ ಪಿಎಫ್‍ಐ ಸಂಘಟನೆಯ ನಂಟಿರುವ ಸಂಶಯ ಇದ್ದು, ಪಿಎಫ್‍ಐ ಸಂಘಟನೆಗೆ ಐಎಂಎ ಮೂಲಕ ಹಣಕಾಸು ನೆರವು ನೀಡಿರುವ ಆರೋಪ ಇದೆ. ಇಂತಹ ಸಂಸ್ಥೆ ಜನರಿಗೆ ಮೋಸ ಮಾಡಿದ್ದು, ಜನರಿಗೆ ವಂಚಿಸಿ ಬಹುಕೋಟಿ ಹಣ ಲೂಟಿ ಮಾಡಿದ್ದಾರೆ ಎಂದರು.

ಐಎಂಎ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ರೋಷನ್ ಬೇಗ್, ಜಮೀರ್ ಅಹಮದ್ ಹೆಸರು ಕೇಳಿ ಬರುತ್ತಿದೆ. ಆದ ಕಾರಣ ಸರ್ಕಾರ ಈ ಕಾಂಗ್ರೆಸ್ ಮುಖಂಡರ ಆಸ್ತಿ ಜಪ್ತಿ ಮಾಡಿ ಮೋಸ ಹೋದ ಬಡ ಜನರಿಗೆ ನೀಡಬೇಕು. ಅಲ್ಲದೇ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ವಹಿಸಬೇಕಿದೆ ಎಂದು ಆಗ್ರಹಿಸಿದರು.

ಭಯೋತ್ಪಾದಕ ಕೆಲಸಗಳಿಗೆ ನೆರವು ನೀಡಿರುವ ಬಗ್ಗೆಯೂ ತನಿಖೆ ನಡೆಯಬೇಕಿದ್ದು, ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಇದು ಅಗತ್ಯವಾಗಿದೆ. ಒಂದು ವರ್ಷದ ಹಿಂದೆಯೇ ಕೇರಳದ ನಮ್ಮ ಕಾರ್ಯಕರ್ತರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದರು. ಆ ವೇಳೆಯೇ ನನ್ನ ಸಂಪರ್ಕದಲ್ಲಿದ್ದ ಹಲವು ಮಂದಿಗೆ ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡದಂತೆ ಹೇಳಿದ್ದೆ. ಆದರೆ ಸದ್ಯ ಬಡ ಜನರಿಗೆ ಮೋಸ ಆಗಿದ್ದು, ಸಮಗ್ರ ತನಿಖೆ ಅಗತ್ಯವಿದೆ ಎಂದರು.

Comments

Leave a Reply

Your email address will not be published. Required fields are marked *