ಹೌದು, ನಾನು ಪೆದ್ದಿ – ದಾಸವಾಣಿ ತಿಳಿಸಿ ಸಿದ್ದುಗೆ ಕರಂದ್ಲಾಜೆ ತಿರುಗೇಟು

ಬೆಳಗಾವಿ (ಚಿಕ್ಕೋಡಿ): ನಾವು ಜಾತಿ ಒಡೆಯಲ್ಲ, ಧರ್ಮ ಒಡೆಯಲ್ಲ ಅದಕ್ಕೆ ನಾವು ಪೆದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ಕೊಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶೋಭಾ ಪೆದ್ದಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ಹೌದು ನಾನು ಪೆದ್ದಿ. ನಾವು ಜಾತಿ ಒಡೆದಿಲ್ಲ, ಧರ್ಮ ಒಡೆದಿಲ್ಲ, ನಾವು ಪೆದ್ದರೆ? ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳನ್ನ ಒಡೆದವರು, ಸ್ವಾರ್ಥಕ್ಕಾಗಿ ಧರ್ಮ ಒಡೆಯುವವರು ನೀವು. ನಿಮ್ಮಂಥವರನ್ನ ನೋಡಿಯೇ ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ದಿಯ ಬಿಡು ನಾಲಗೆ ಎಂದು ಪುರಂದರ ದಾಸರು ಹೇಳಿರಬಹುದು ಎಂದು ದಾಸವಾಣಿ ಹೇಳಿ ತಿರುಗೇಟು ನೀಡಿದರು.

ಬಳಿಕ ತಮ್ಮ ವಿರುದ್ಧ ಸ್ಪರ್ಧಿಸಲು ಪ್ರಮೋದ್ ಮದ್ವರಾಜ್ ಅವರನ್ನು ಎರವಲು ತಂದು ಅಭ್ಯರ್ಥಿ ಮಾಡಿದ್ದೀರಿ. ದೋಸ್ತಿ ಸರ್ಕಾರದ ಪತನ ಅಂತ ಮೇ 23ನೇ ತಾರೀಕಿನ ರಾತ್ರಿ ಬ್ರೇಕಿಂಗ್ ನ್ಯೂಸ್ ಬರುತ್ತೆ ಎಂದು ಮೈತ್ರಿ ಸರ್ಕಾರದ ವಾಲಿಡಿಟಿ ಬಗ್ಗೆ ಶೋಭಾ ಅವರು ಭವಿಷ್ಯ ನುಡಿದ್ದಾರೆ.

ಮಹದಾಯಿ ವಿಚಾರವಾಗಿ ಮಾತನಾಡಿ ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರ ಮಹದಾಯಿ ಯೋಜನೆಗೆ ಬಜೆಟ್‍ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಇವರಿಗೆ ಕಾಣುವುದು ಮಂಡ್ಯ ಮತ್ತು ಹಾಸನ ಮಾತ್ರವಾ? ಉತ್ತರ ಕರ್ನಾಕಟದಲ್ಲಿ ಮನೆ ಮಾಡುತ್ತೀರಿ. ಇಲ್ಲಿನ ಜನರ ಜತೆ ಓಡಾಡುತ್ತೀರಿ. ಆದ್ರೆ ಚುನಾವಣೆ ಬಳಿಕ ಈ ಭಾಗದ ಜನಕ್ಕೆ ಏನು ಮಾಡಿದ್ದೀರಾ ಎಂದು ಕುಟುಕಿದರು.

ನಂತರ ಸಿದ್ದರಾಮಯ್ಯನವರೇ ನೀವು ಮಾತನಾಡಿದ ಭಾಷೆ ನಿಮಗೆ ಗೌರವ ತರುತ್ತಾ? ಪ್ರಧಾನಿಗೆ ಏಕವಚನದಲ್ಲಿ ಮಾತನಾಡುತ್ತೀರಾ ನಿಮಗೆ ಪ್ರಧಾನಿ ನರೇಂದ್ರ ಮೋದಿ ಕಂಡರೆ ಭಯ. ಅದಕ್ಕೆ ಹೀಗೆ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದೀರಿ ಎಂದು ಟೀಕಿಸಿದರು.

Comments

Leave a Reply

Your email address will not be published. Required fields are marked *