ಶಿವಮೊಗ್ಗ ಹರ್ಷ ಕೊಲೆ ಕೇಸ್‌| ಸಾಕ್ಷಿಗೆ ಬೆದರಿಕೆ ಹಾಕಿದ ಯುವಕನ ಮೇಲೆ ಎಫ್‌ಐಆರ್‌

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ (Harsha Murder Case) ಸಂಬಂಧಿಸಿಂತೆ ಸಾಕ್ಷಿಗೆ (Witness) ಬೆದರಿಕೆ ಹಾಕಿದ ಯುವಕನ ವಿರುದ್ಧ ಕೇಸ್‌ ದಾಖಲಾಗಿದೆ.

ಎನ್‌ಐಎ ನ್ಯಾಯಾಲಯದ ಸೂಚನೆ ಮೇರೆಗೆ ಶಿವಮೊಗ್ಗದ (Shivamogga) ತುಂಗಾನಗರ ಠಾಣೆಯಲ್ಲಿ ಅನಾಮಿಕ ವ್ಯಕ್ತಿಯ ಮೇಲೆ ಸಾಕ್ಷಿಯೊಬ್ಬರು ದೂರು ನೀಡಿದ ನಂತರ ಎಫ್‌ಐಆರ್‌ (FIR) ದಾಖಲಾಗಿದೆ.

ಏನಿದು ಪ್ರಕರಣ?
ಶಿವಮೊಗ್ಗದ ಸೀಗೆಹಟ್ಟಿ ಬಳಿ ಎರಡು ವರ್ಷದ ಹಿಂದೆ ಹರ್ಷ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್‌ ಬಂಕ್‌ ಉದ್ಯೋಗಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (NIA) ಸಾಕ್ಷಿಯಾಗಿ ಪರಿಗಣಿಸಿತ್ತು.  ಇದನ್ನೂ ಓದಿ: ಇವಿಎಂ ದೂರೋದನ್ನು ನಿಲ್ಲಿಸಿ, ಫಲಿತಾಂಶವನ್ನು ಸ್ವೀಕರಿಸಿ – ಕಾಂಗ್ರೆಸ್‌ಗೆ ಉಮರ್ ಅಬ್ದುಲ್ಲಾ ಕಿವಿಮಾತು

ಈಗ ಆತನಿಗೆ ಅಪರಿಚಿತನೊಬ್ಬ ಬೆದರಿಕೆ ಒಡ್ಡಿರುವ ಆರೋಪ ಕೇಳಿ ಬಂದಿದೆ. ಹಿಂದೂ ಹರ್ಷ ಹತ್ಯೆಯಾದ ದಿನ ಆರೋಪಿಗಳು ಶಿವಮೊಗ್ಗದ ಪೆಟ್ರೋಲ್‌ ಬಂಕ್‌ನಲ್ಲಿ ತಮ್ಮ ಕಾರಿಗೆ ಇಂಧನ ಭರ್ತಿ ಮಾಡಿಸಿಕೊಂಡಿದ್ದರು. ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್‌ ಭರ್ತಿ ಮಾಡಿದ್ದ. ಈ ಕಾರಣಕ್ಕೆ ಆತನನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು.

ಸದ್ಯ ಆ ಯುವಕ ಪೆಟ್ರೋಲ್‌ ಬಂಕ್‌ ತೊರೆದು ಬೇರೆ ಕೆಲಸ ಮಾಡುತ್ತಿದ್ದಾನೆ. ಕೆಲ ದಿನಗಳ ಹಿಂದೆ ಪೆಟ್ರೋಲ್‌ ಬಂಕ್‌ಗೆ ಸ್ಕೂಟಿಯಲ್ಲಿ ತೆರಳಿದ್ದ ವ್ಯಕ್ತಿಯೊಬ್ಬ ಆ ಯುವಕ ಯಾರು ಎಂದು ವಿಚಾರಿಸಿದ್ದ. ಆತ ಕೆಲಸ ಬಿಟ್ಟಿರುವುದಾಗಿ ತಿಳಿಸಿದಾಗ, ‘ಕೋರ್ಟ್‌ಗೆ ಹೋಗುವುದು ಬೇಡ ಎಂದು ಹೇಳಿ’ ಎಂದು ಬಂಕ್‌ ಸಿಬ್ಬಂದಿಗೆ ತಿಳಿಸಿ ಹೋಗಿದ್ದ ಎಂದು ಆರೋಪಿಸಲಾಗಿದೆ.

ಈ ವಿಷಯ ಸ್ನೇಹಿತರಿಂದ ಯುವಕನಿಗೆ ಗೊತ್ತಾಗಿದೆ. ಡಿ.12ರಂದು ಎನ್‌ಐಎ ನ್ಯಾಯಾಲಯದಲ್ಲಿ ಯುವಕ ಸಾಕ್ಷಿ ನುಡಿದಿದ್ದಾನೆ. ಮರುದಿನ ಕೋರ್ಟ್‌ ಸೂಚನೆ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.