ಕೆರೆಯಲ್ಲಿ ಮಣ್ಣು ಅಗೆಯಲು ನಿಂತ ಶಿವಮೊಗ್ಗ ಜಿ.ಪಂ ಸಿಇಓ

– ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದ ಅಧಿಕಾರಿಗಳು

ಶಿವಮೊಗ್ಗ: ಸ್ವತಃ ತಾವೇ ಕೆರೆಯಲ್ಲಿ ಮಣ್ಣು ಅಗೆಯುವ ಮೂಲಕ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓ ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಸಿಇಓ ವೈಶಾಲಿಯವರು ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದ್ದಾರೆ. ಶಿವಮೊಗ್ಗದ ಹಾಡೋನಹಳ್ಳಿಯ ಕೆರೆಯೊಂದರಲ್ಲಿ ರಾಷ್ಟ್ರೀಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎನ್‌ಆರ್‌ಇಜಿ ) ಅಡಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಸಿಇಓ ಅವರು ತಾನು ನಿಂತು ಬಾಣಲಿಗೆ ಮಣ್ಣು ತುಂಬಿದ್ದಾರೆ.

ಮಂಗಳವಾರ ಬೆಳಗ್ಗೆ ಕಾಮಗಾರಿ ವೀಕ್ಷಣೆಗೆಂದು ಸ್ಥಳಕ್ಕೆ ವೈಶಾಲಿಯವರು ತೆರಳಿದ್ದರು. ಈ ವೇಳೆ ಅಧಿಕಾರಿ ಕೂಲಿ ಕಾರ್ಮಿಕರ ಜೊತೆಗೂಡಿ ತಾನು ಕೂಡ ಹೂಳೆತ್ತಲು ಅಣಿಯಾದರು. ಕೇವಲ ಸಿಇಓ ಮಾತ್ರವಲ್ಲದೆ ಶಿವಮೊಗ್ಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅತಿಕ್ ಪಾಷಾ ಕೂಡ ಮಣ್ಣು ತುಂಬಿದ ಬುಟ್ಟಿ ಹೊತ್ತು ನಡೆದರು. ಈ ಮೂಲಕ ಅಧಿಕಾರಿಗಳು ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದ್ದಾರೆ.

ಕಳೆದ ತಿಂಗಳು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಎನ್‌ಆರ್‌ಇಜಿ ಯೋಜನೆಯಡಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಎನ್‌ಆರ್‌ಇಜಿ ಕಾಮಗಾರಿ ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳು ನೂರಾರು ಜನ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿರುವ ಕಾಮಗಾರಿಗೆ ಉತ್ತೇಜಿಸಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *