ರೈಲ್ವೇ ಮಾರ್ಗ ವಿದ್ಯುದ್ದೀಕರಣಕ್ಕೆ 25 ಕೋಟಿ ರೂ. ಘೋಷಣೆ

– ಬೀರೂರು-ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗ

ಶಿವಮೊಗ್ಗ: ಬೀರೂರು-ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗದ ವಿದ್ಯುದ್ದೀಕರಣ ಯೋಜನೆಗೆ ಕೇಂದ್ರ ಸರ್ಕಾರವು ಹಣ ಮಂಜೂರು ಮಾಡಿದ್ದು, 2020-21ನೇ ಸಾಲಿನ ಬಜೆಟ್ ನಲ್ಲಿ ವಿದ್ಯುದ್ದೀಕರಣ ಕಾಮಗಾರಿಗಾಗಿ 25 ಕೋಟಿ ರೂ.ಗಳನ್ನು ಘೋಷಿಸಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.

ಸಂಸದನಾದ ಬಳಿಕ ಶಿವಮೊಗ್ಗಕ್ಕೆ ಹಲವು ರೈಲುಗಳನ್ನು ತರಲು ಶ್ರಮ ವಹಿಸಲಾಗಿತ್ತು. ಅದರ ಪರಿಣಾಮವಾಗಿ ಹಲವು ರೈಲುಗಳು ಲಭ್ಯವಾಗಿವೆ. ಮಲೆನಾಡಿನೊಂದಿಗೆ ಮಧ್ಯ ಮತ್ತು ಉತ್ತರ ಕರ್ನಾಟಕಕ್ಕೆ ನೇರ ಸಂಪರ್ಕ ಕಲ್ಪಿಸುವ ಪ್ರಯತ್ನದಲ್ಲೂ ಯಶಸ್ವಿಯಾಗಿದೆ. ಇದರ ಪರಿಣಾಮ ಈಗಾಗಲೇ ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹಾಗೂ ಶಿವಮೊಗ್ಗ-ಹರಿಹರ ನೂತನ ರೈಲು ಮಾರ್ಗಗಳು ಮಂಜೂರು ಆಗಿದ್ದು ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ.

ಬೀರೂರು-ಶಿವಮೊಗ್ಗ-ತಾಳಗುಪ್ಪ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಬೇಕು ಎಂಬ ಒತ್ತಾಸೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಇದರಿಂದ ಈ ಭಾಗದ ರೈಲುಗಳು ವಿದ್ಯುತ್ ಎಂಜಿನ್‍ಗಳ ಸಹಾಯದಿಂದ ಚಲಿಸಲಿವೆ. ಇದರಿಂದ ರೈಲುಗಳ ವೇಗ ಹೆಚ್ಚಾಗಲಿದ್ದು, ಮಾಲಿನ್ಯ ರಹಿತ ರೈಲು ಸಂಚಾರ ಸಾಕಾರಗೊಳ್ಳಲಿದೆ. ಇದನ್ನೂ ಓದಿ: ರೈಲ್ವೆ ಸಚಿವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ

ನಮ್ಮ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ, ಇದಕ್ಕೆ ಸಹಕರಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ರೈಲ್ವೆ ಸಚಿವರಾದ ಪಿಯುಶ್ ಗೋಯಲ್, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಸಂಸದ ಬಿ.ವೈ.ರಾಘವೇಂದ್ರ ಧನ್ಯವಾದ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *