ಜೂಜಾಟದಲ್ಲಿ ಜಗಳ – ರೌಡಿಶೀಟರ್‌ನನ್ನು ಕೊಚ್ಚಿ ಕೊಂದವರು ಅರೆಸ್ಟ್

ಶಿವಮೊಗ್ಗ: ನಗರದ ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿಯ ಸಹೋದರ ಗಿರೀಶ್ ನನ್ನು ಕೊಚ್ಚಿಕೊಲೆ ಮಾಡಿದ್ದ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಮಾಡಿದ ಆರೋಪಿಗಳಾದ ಅಜ್ರು, ಸಲ್ಮಾನ್, ಶೋಯೆಬ್ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಜ್ರು ಹಾಗೂ ಆತನ ತಂಡ ಗುರುವಾರ ಸಂಜೆ ಶಿವಮೊಗ್ಗದ ಗೋಪಾಳ ಬಳಿಯ ಸಿದ್ದೇಶ್ವರ ವೃತ್ತದ ಬಳಿ ಗಿರೀಶ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಅಜ್ರು ಹಾಗೂ ಕೊಲೆಯಾದ ಗಿರೀಶ್‍ನ ಸಂಬಂಧಿ ಹರೀಶ್ ಇಬ್ಬರು ನಿನ್ನೆ ಮಧ್ಯಾಹ್ನ ಜೂಜಾಟದಲ್ಲಿ ತೊಡಗಿದ್ದರು. ಈ ವೇಳೆ ಅಜ್ರು ಹಾಗೂ ಹರೀಶ್ ನಡುವೆ ಗಲಾಟೆ ನಡೆದಿತ್ತು. ಈ ವಿಷಯ ಗಿರೀಶ್‍ನಿಗೆ ತಿಳಿಯುತ್ತಿದ್ದಂತೆ ಗಿರೀಶ್ ಸ್ಥಳಕ್ಕೆ ತೆರಳಿ ಅಜ್ರು ಜೊತೆ ಗಲಾಟೆ ಮಾಡಿಕೊಂಡಿದ್ದ. ಇದೇ ಜಿದ್ದನ್ನು ಇಟ್ಟುಕೊಂಡ ಅಜ್ರು ಹಾಗೂ ಆತನ ಸಹೋದರರು ಸ್ನೇಹಿತರೊಂದಿಗೆ ಸಿದ್ದೇಶ್ವರ ವೃತ್ತದ ಬಳಿ ಗಿರೀಶ್ ಬರುವುದನ್ನು ಕಾಯುತ್ತಾ ಕುಳಿತಿದ್ದರು. ಗಿರೀಶ್ ಬೈಕ್ ನಲ್ಲಿ ಬರುತ್ತಿದ್ದನ್ನು ಗಮನಿಸಿದ ಅಜ್ರು ಹಾಗೂ ಆತನ ತಂಡ ಏಕಾಏಕಿ ಗಿರೀಶ್‍ನ ಮೇಲೆ ಮಚ್ಚು ಲಾಂಗುಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾರೆ.

ಹಲ್ಲೆಗೊಳಗಾದ ಗಿರೀಶ್ ನರಳಿ ನರಳಿ ಪ್ರಾಣ ಬಿಟ್ಟ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತ ತುಂಗಾನಗರ ಠಾಣೆ ಪೊಲೀಸರು ಗಿರೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ರು, ಸಲ್ಮಾನ್, ಶೋಯೆಬ್ ಸೇರಿದಂತೆ 6 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಇನ್ನು ಉಳಿದ ನಾಲ್ವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *