10 ದಿನಗಳಿಂದ ನಿಂತಿದ್ದ ಓಮ್ನಿಯಲ್ಲಿ ಮಹಿಳೆ ಶವ ಪತ್ತೆ

ಶಿವಮೊಗ್ಗ: ನಗರದ ವಿದ್ಯಾನಗರ ಬಡಾವಣೆಯ ರೈಲ್ವೆ ನಿಲ್ದಾಣದ ಬಳಿ ಹತ್ತು ದಿನಗಳಿಂದ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರಿನಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೆಎ- 20 ಎಂಎ 8877 ಸಂಖ್ಯೆಯ ಓಮ್ನಿ ಕಾರಿನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಬೇರೆ ಎಲ್ಲಿಯೋ ಮಹಿಳೆಯನ್ನು ಕೊಲೆಗೈದು, ಶವವನ್ನು ಪ್ಲಾಸ್ಟಿಕ್‍ನಿಂದ ಸುತ್ತಿ ಕಾರಿನಲ್ಲಿ ಇಟ್ಟಿದ್ದಾರೆ. ಬಳಿಕ ಕಾರನ್ನು ಚಾಲನೆ ಮಾಡಿಕೊಂಡು ಬಂದು ರೈಲ್ವೆ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು 10 ದಿನಗಳಿಂದ ನಿಂತಿದ್ದ ಕಾರಿನಿಂದ ಕೊಳೆತ ವಾಸನೆ ಬರುತ್ತಿತ್ತು. ಹೀಗಾಗಿ ಪಾರ್ಕಿಂಗ್‍ನ ಮೇಲ್ವಿಚಾರಕರೊಬ್ಬರು ಸ್ಥಳಕ್ಕೆ ಬಂದು ಕಾರನ್ನು ಪರಿಶೀಲಿಸಿದಾಗ ಶವ ಪತ್ತೆಯಾಗಿದೆ. ಈ ಕುರಿತು ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಹಾಗೂ ಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ತಂಡ ಸಹ ಭೇಟಿ ನೀಡಿ, ಶೋಧ ಕಾರ್ಯ ನಡೆಸಿದೆ.

ಅಪರಿಚಿತ ಮಹಿಳೆ ಶವ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಶವ ಯಾರದ್ದು, ಇದು ಆತ್ಮಹತ್ಯೆಯೋ? ಕೊಲೆಯೋ? ಬೇರೆಡೆ ಎಲ್ಲಿಯಾದರೂ ಕೊಲೆ ಮಾಡಿ ಕಾರಿನಲ್ಲಿಟ್ಟು ಆರೋಪಿಗಳು ಪರಾರಿಯಾಗಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೋಟೆ ಠಾಣೆಯ ಪೊಲೀಸರ, ಮೃತ ಮಹಿಳೆಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಬಹಿರಂಗಗೊಳ್ಳಲಿದೆ.

Comments

Leave a Reply

Your email address will not be published. Required fields are marked *