ಐಟಿಐ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ ಬೇಡ- ಎನ್‍ಎಸ್‍ಯುಐ ಆಗ್ರಹ

ಶಿವಮೊಗ್ಗ: ಐಟಿಐ ವಿದ್ಯಾರ್ಥಿಗಳಿಗೆ ಏಕಾಏಕಿ ಆನ್‍ಲೈನ್ ಪರೀಕ್ಷೆ ನಡೆಸುತ್ತಿರುವುದನ್ನು ರದ್ದು ಪಡಿಸುವಂತೆ ಆಗ್ರಹಿಸಿ ಜಿಲ್ಲಾ ಎನ್‍ಎಸ್‍ಯುಐ ಸಂಘಟನೆ ಮುಖಂಡರು ಮತ್ತು ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೇ ಐಟಿಐ ವಿದ್ಯಾರ್ಥಿಗಳಿಗೆ ಏಕಾಏಕಿಯಾಗಿ ಸಂಯೋಜನೆ ಅಡಿ ಆನ್‍ಲೈನ್ ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ಸಾಮಾನ್ಯವಾಗಿ ಐಟಿಐ ಕೋರ್ಸ್ ಗಳಿಗೆ ಪ್ರವೇಶ ಪಡೆಯುವುದು ಗ್ರಾಮೀಣ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು. ಅಲ್ಲದೇ ಪ್ರೌಢಶಾಲೆಗಳಲ್ಲಿ ಅತ್ಯಂತ ಕಡಿಮೆ ಅಂಕ ಗಳಿಸಿದವರೇ ಹೆಚ್ಚಾಗಿ ಐಟಿಐ ಕೋರ್ಸ್ ಗಳಿಗೆ ಆಯ್ಕೆಯಾಗಿರುತ್ತಾರೆ. ಯಾವುದೇ ಪೂರ್ವಭಾವಿ ತಯಾರಿಯಿಲ್ಲದೇ ಐಟಿಐ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ ನಡೆಸಲು ಮುಂದಾಗಿರುವುದು ಅವರ ಕಲಿಕೆಯ ಮಟ್ಟಕ್ಕಿಂತ ಹೆಚ್ಚಿನ ಪರೀಕ್ಷೆ ನಡೆಸಿದಂತಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ಆನ್‍ಲೈನ್ ಪರೀಕ್ಷೆ ಎದುರಿಸಲು ಸತತವಾಗಿ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್‍ಗಳ ಅಭ್ಯಾಸ ನಡೆಸಬೇಕು. ಆದರೆ ಐಟಿಐ ವಿದ್ಯಾರ್ಥಿಗಳಿಗೆ ಈ ಬಗ್ಗೆ ಯಾವುದೇ ತರಬೇತಿ ನೀಡದೇ ಪರೀಕ್ಷೆ ಎದುರಿಸುವುದು ಕಷ್ಟವಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಅಭ್ಯಾಸ ನಡೆಸಲು ಬಡ, ಮಧ್ಯಮ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಕಂಪ್ಯೂಟರ್, ಸ್ಮಾರ್ಟ್ ಫೋನ್ ಖರೀದಿಸಲು ಆಗುವುದಿಲ್ಲ. ಅಲ್ಲದೇ ಆನ್‍ಲೈನ್ ಪರೀಕ್ಷೆ ಎದುರಿಸುವ ತರಬೇತಿಯೂ ದೊರೆತಿಲ್ಲ. ಆದ್ದರಿಂದ ಏಕಾಏಕಿ ವಿದ್ಯಾರ್ಥಿಗಳ ಮೇಲೆ ಪ್ರಯೋಗ ನಡೆಸದೇ ಹಿಂದಿನ ಪದ್ಧತಿಯಲ್ಲೇ ಪರೀಕ್ಷೆ ನಡೆಸಲು ತಾಂತ್ರಿಕ ಶಿಕ್ಷಣ ಇಲಾಖೆಗೆ ಆದೇಶ ನೀಡಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿದರು.

Comments

Leave a Reply

Your email address will not be published. Required fields are marked *