ಲೋಕಾ ಚುನಾವಣೆಗೆ ಶಿವಸೇನೆ ಏಕಾಂಗಿಯಾಗಿ ಸ್ಪರ್ಧೆ: ಶಾ- ಉದ್ಧವ್ ಮಾತುಕತೆ ವಿಫಲ?

ಮುಂಬೈ: ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಧವ್ ಠಾಕ್ರೆಯ ಜೊತೆ ಮಾತುಕತೆ ನಡೆಸಿದರೂ 2019ರ ಲೋಕಸಭಾ ಚುನಾವಣೆಯ ವೇಳೆ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಎಂದು ಶಿವಸೇನೆ ತಿಳಿಸಿದೆ.

ಶಿವಸೇನೆಯ ಪ್ರಮುಖ ಮುಖಂಡರಾದ ಸಂಜಯ್ ರಾವತ್ ಪ್ರತಿಕ್ರಿಯಿಸಿ, ಅಮಿತ್ ಶಾ ಅವರ ಸಿದ್ಧಾಂತವನ್ನು ನಾವು ಒಪ್ಪುತ್ತೇವೆ. ಆದರೆ ರಾಜ್ಯದಲ್ಲಿ ನಡೆದ ರಾಜಕೀಯ ಬದಲಾವಣೆಗಳಿಂದ ಶಿವಸೇನೆ ಮುಂಬರುವ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎನ್ನುವ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ನಮ್ಮ ಈ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಬುಧವಾರ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಶಿವಸೇನಾ ಜೊತೆ ಮೈತ್ರಿ ವಿಚಾರವಾಗಿ ನಡೆದ ಮಾತುಕತೆಯಲ್ಲಿ ಅಮಿತ್ ಶಾ, ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ನಡುವೆ 2 ಗಂಟೆಗಳ ಮಾತುಕತೆ ನಡೆಸಿದ್ದರು.

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರ ಭೇಟಿ ತೀವ್ರ ಕುತೂಹಲ ಕೆರಳಿಸಿತ್ತು. ಬುಧವಾರ ಸಂಜೆ ಮುಂಬೈನ ಮಾತೋಶ್ರೀ ನಿವಾಸದಲ್ಲಿ ಉದ್ಧವ್ ಅವರನ್ನು ಭೇಟಿ ಮಾಡಿ ಸುಮಾರು 2 ಗಂಟೆಗಳ ನಡೆದ ಮಾತುಕತೆಯಲ್ಲಿ ಅನೇಕ ವಿಷಯಗಳು ಚರ್ಚೆಯಾಗಿವೆ ಎಂದು ತಿಳಿದು ಬಂದಿದೆ.

ಮಾತುಕತೆ ವೇಳೆ ಅಮಿತ್ ಶಾ ಅವರ ಮನವಿಯನ್ನು ಉದ್ಧವ್ ಠಾಕ್ರೆ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದ್ದು. ಮುಂಬರುವ ಚುನಾವಣೆಯಲ್ಲಿ ಶಿವಸೇನೆಯು ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಅವರು ಸರ್ಕಾರದಲ್ಲಿ ಶಿವಸೇನೆಯನ್ನು ನಿರ್ಲಕ್ಷಿಸುವ ಬಗ್ಗೆ ಠಾಕ್ರೆ ಈ ವೇಳೆ ದೂರು ನೀಡಿದ್ದಾರೆ. ಬಿಜೆಪಿ ಸರ್ಕಾರದ ನೋಟು ಅಮಾನ್ಯೀಕರಣ, ಜಿಎಸ್‍ಟಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತಿದೆ ಎಂದು ಠಾಕ್ರೆ ಶಾ ಜೊತೆ ಮಾತುಕತೆಯ ವೇಳೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಎರಡು ಗಂಟೆಗಳಲ್ಲಿ ನಡೆದ ಮಾತುಕತೆಯಲ್ಲಿ ಮೊದಲು ಶಾ ಮತ್ತು ಠಾಕ್ರೆಯವರು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ನಂತರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಈ ಮಾತುಕತೆಯಲ್ಲಿ ಭಾಗಿಯಾಗಿ ಕೊನೆಯದಾಗಿ ಪಕ್ಷದ ಮುಖಂಡರುಗಳು ಜೊತೆ ಮಾತುಕತೆ ನಡೆಸಿದ್ದಾರೆ.

ಮಾತುಕತೆ ನಡೆಯುವ ಮುನ್ನ ಬುಧವಾರ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ “ಬಿಜೆಪಿಯೂ ಈಗಾಗಲೇ ಜನರ ನಡುವಿನ ಸಂಬಂಧವನ್ನು ಹಾಳುಮಾಡಿಕೊಂಡಿದೆ. ವ್ಯಾಪಾರದ ದೃಷ್ಟಿಯಿಂದ ಮೈತ್ರಿಗೆ ಮಾತುಕತೆ ನಡೆಸುತ್ತಿದೆ” ಎಂದು ಬರೆದುಕೊಂಡಿತ್ತು.

ಮಾತುಕತೆಗೂ ಮುನ್ನ ಶಿವಸೇನಾ ಮತ್ತು ಬಿಜೆಪಿ ನಡುವಿನ ಬಿರುಕು ಶಮನಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಒಟ್ಟಿಗೆ ಸ್ಫರ್ಧಿಸುತ್ತೇವೆ ಎಂದು ಮಾಧ್ಯಮಕ್ಕೆ ಶಾ ಹೇಳಿಕೆ ನೀಡಿದ್ದರು. ಶಿವಸೇನೆ ನಾಯಕರು ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರೂ ಬಿಜೆಪಿ ಮೂಲಗಳು ಈ ಮಾತುಕತೆ ಯಶಸ್ವಿಯಾಗಿವೆ ಎಂದು ತಿಳಿಸಿವೆ.

Comments

Leave a Reply

Your email address will not be published. Required fields are marked *