ಅವಿಶ್ವಾಸ ಮಂಡನೆ ವಿರುದ್ಧ ಶಿವಸೇನೆ ಮತ – ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬೆಂಬಲ

ನವದೆಹಲಿ: ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಂಡಸಲಿಚ್ಚಿಸಿರುವ ಅವಿಶ್ವಾಸ ಮಂಡನೆ ವಿರುದ್ಧ ಮತ ನೀಡಿ, ಬಿಜೆಪಿಗೆ ಬೆಂಬಲ ನೀಡಲು ಶಿವಸೇನೆ ಮುಂದಾಗಿದೆ.

ಶಿವಸೇನೆ ಪಕ್ಷ ತನ್ನ ಸಂಸದರಿಗೆ ಈ ಕುರಿತು ವಿಪ್ ಜಾರಿ ಮಾಡಿದ್ದು, ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಲು ಸೂಚಿಸಿದೆ.

ಇದಕ್ಕೂ ಮುನ್ನ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಬೆಂಬಲ ನೀಡಲು ಮನವಿ ಮಾಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿತ್ತು, ಇದರ ಬೆನ್ನಲ್ಲೇ ಸದ್ಯ ಶಿವಸೇನೆ ವಿಪ್ ಜಾರಿ ಮಾಡಿದೆ.

ಶಿವಸೇನೆ ಪಕ್ಷದ ನಿರ್ಣಯಕ್ಕೂ ಮುನ್ನ ತಮಿಳುನಾಡು ಸಿಎಂ ಕೆ ಪಳಣಿಸ್ವಾಮಿ ಅವರು ಎಐಎಂಡಿಕೆ ಪಕ್ಷ ಅವಿಶ್ವಾಸ ನಿರ್ಣಯ ವಿರುದ್ಧ ಮತ ಚಲಾಯಿಸುವುದಾಗಿ ಪರೋಕ್ಷವಾಗಿ ತಿಳಿಸಿದ್ದರು.

ಅಂದಹಾಗೇ ತೆಲುಗುದೇಶಂ ಪಕ್ಷವೂ ಆಂಧ್ರ ಪ್ರದೇಶದ ವಿಶೇಷ ಸ್ಥಾನಮಾನ ಆಗ್ರಹಿಸಿ ಸಂಸತ್ ನಲ್ಲಿ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕಲ್ಪಿಸಿವಂತೆ ಮನವಿ ಮಾಡಿತ್ತು. ಇದರಂತೆ ಮನ್ಸೂನ್ ಅಧಿವೇಶನದ ಮೊದಲ ದಿನವಾದ ಬುಧವಾರದಂದು ಸ್ಪೀಕರ್ ಸುಮಿತ್ರಾ ಮಹಾಜನ್ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಶುಕ್ರವಾರ ಅವಕಾಶ ನೀಡಿದ್ದರು.

ಈ ಹಿಂದೆ ಹಲವು ಬಾರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ 2019ರ ಲೋಕಸಭಾ ಚುನಾವಣೆಯ ವೇಳೆ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಎಂದು ತಿಳಿಸಿದ್ದರು. ಅಲ್ಲದೇ ಮಹಾರಾಷ್ಟ್ರ ಚುನಾವಣೆಯ ವೇಳೆಯೂ ಏಕಾಂಗಿಯಾಗಿ ಸ್ಪರ್ಧೆ ಮಾಡುವ ನಿರ್ಣಯವನ್ನು ಶಿವಸೇನೆ ಪಕ್ಷ ಘೋಷಿಸಿತ್ತು.

Comments

Leave a Reply

Your email address will not be published. Required fields are marked *