ಶಿರಾಡಿ ಘಾಟ್ ನಲ್ಲಿ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್, ಟೆಂಪೋ ಟ್ರಾವಲರ್ಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ- ಖಾದರ್

ಹಾಸನ: ಕಳೆದ 6 ತಿಂಗಳಿನಿಂದ ಬಂದ್ ಆಗಿದ್ದ ಶಿರಾಡಿ ಘಾಟ್ ಉದ್ಘಾಟನೆಗೊಂಡು ಈಗಾಗಲೇ ಸಂಚಾರಕ್ಕೆ ಮುಕ್ತಾಗಿದ್ದು, ಆದ್ರೆ ಕಾಮಗಾರಿ ಅಪೂರ್ಣ ಆಗಿದ್ದರಿಂದ ಭಾರೀ ವಾಹನ, ಬಸ್ ಸಂಚಾರಕ್ಕೆ ತಡೆ ನೀಡಲಾಗಿದೆ ಅಂತ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.

ಹಾಸನ- ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್, ಟೆಂಪೋ ಟ್ರಾವಲರ್ಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. 15 ದಿನಗಳ ಅವಧಿಯೊಳಗೆ ಡೇಂಜರ್ ಝೋನ್ ಕಾಮಗಾರಿ ಮುಗಿಸಲು ಗುತ್ತಿಗಾದಾರರಿಗೆ ಸೂಚನೆ ನೀಡಲಾಗಿದೆ.

ಘಾಟ್‍ನಲ್ಲಿ ವೇಗದ ಮಿತಿ 60 ಕಿ.ಮೀ. ಹೆಚ್ಚಿರದಂತೆ ಸೂಚಿಸಿದ್ದು, ಸಿಸಿಟಿವಿ ಅಳವಡಿಸಿ ನಿಗಾ ಇಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಶಿರಾಡಿ ಪ್ರವಾಸಿ ಮಂದಿರದ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್ ಪಿ ಸಭೆಯಲ್ಲಿ ಭಾಗಿಯಾಗಿದ್ದರು.

ರಾಜಧಾನಿಯಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡ್ ಘಾಟ್ ಅನ್ನು ಅಧಿಕಾರಿಗಳು ಪಶ್ಚಿಮಾಭಿಮುಖವಾಗಿ ಸಿದ್ಧಪಡಿಸಿದ್ದರು. ಆದ್ರೆ ಸ್ಥಳಕ್ಕಾಗಮಿಸಿದ ಸಚಿವ ರೇವಣ್ಣ ಅವರು ಶುಭಕಾರ್ಯಗಳನ್ನು ಪೂರ್ವಾಭಿಮುಖವಾಗಿ ಮಾಡಬೇಕು ಎಂದು ಟೇಪ್ ಕೆಳಗೆ ನುಸುಳಿ ಎಲ್ಲರಿಗೂ ಪೂರ್ವಾಭಿಮುಖವಾಗಿ ನಿಲ್ಲುವಂತೆ ಸೂಚಿಸಿದ್ದರು. ಸಚಿವರು ದಿಕ್ಕು ಬದಲಿಸಿದ್ದರಿಂದ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಯಿತು. ದಿಕ್ಕು ಬದಲಿಸಿ ಪೂರ್ವಾಭಿಮುಖವಾಗಿ ನಿಂತ ಸಚಿವರು ಟೇಪ್ ಕತ್ತರಿಸಿ ಶಿರಾಡಿ ಘಾಟ್ ಸಂಚಾರವನ್ನು ಮುಕ್ತಗೊಳಿಸಿದ್ದರು.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿರುವ ಒಟ್ಟು 26 ಕಿ.ಮೀ ಉದ್ದದ ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ಸುಮಾರು 30 ವರ್ಷ ಬಾಳಿಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದ್ದು ಭಾನುವಾರ ಸಂಚಾರಕ್ಕೆ ಮುಕ್ತವಾಗಿದೆ.

Comments

Leave a Reply

Your email address will not be published. Required fields are marked *