ತುಲಾಭಾರ ಸೇವೆ ವೇಳೆ ಗಾಯಗೊಂಡ ಶಶಿ ತರೂರ್- ನೆಟ್ಟಿಗರಿಂದ ಟ್ರೋಲ್

ತಿರುವನಂತಪುರಂ: ದೇವಾಲಯದಲ್ಲಿ ತುಲಾಭಾರ ಸೇವೆ ನೀಡಲು ಮುಂದಾಗಿ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಕಾಂಗ್ರೆಸ್ ನಾಯಕ ಶಶಿತರೂರ್ ರನ್ನು ಟ್ವಿಟ್ಟಿಗರು ಕಾಲೆಳೆದಿದ್ದು, ಹೆಲ್ಮೆಟ್ ಧರಿಸಿ ದೇವರ ಸೇವೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದರ ನಡುವೆ ಮುಂದಿನ ಸಮಯದಲ್ಲಿ ಹೆಲ್ಮೆಟ್ ಧರಿಸಿ ತುಲಾಭಾರ ಮಾಡಿಸಿಕೊಳ್ಳುವಂತೆ ಕುಟುಂಬಸ್ಥರು ಕೋರುತ್ತಿದ್ದಾರೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ತುಲಾಭಾರ ಸೇವೆ ವೇಳೆ ನಡೆದ ಅವಘಡದಲ್ಲಿ ಗಾಯಗೊಂಡಿದ್ದ ಶಶಿ ತರೂರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿ ಕೆಲ ಮಂದಿ ಕಾಲೆಳೆದಿದ್ದರು. ತುಲಾಭಾರ ಮಾಡುವ ವೇಳೆ ಹೆಲ್ಮೆಟ್ ಧರಿಸುವಂತೆ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ಶಶಿ ತರೂರ್ ನನ್ನ ಕುಟುಂಬ ಕೂಡ ಮುಂದಿನ ಬಾರಿ ಇದನ್ನೇ ಬಯಸುತ್ತಿದೆ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

ಇತ್ತ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ರಾಜಕೀಯ ಪ್ರಚಾರ ವೇಳೆಯೇ ಶಶಿ ತರೂರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ತಿರುವನಂತಪುರಂನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ಶಶಿ ತರೂರ್ ಅವರ ಆರೋಗ್ಯ ವಿಚಾರಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಫೋಟೋ ಪೋಸ್ಟ್ ಮಾಡಿರುವ ಶಶಿ ತರೂರ್, ನಿರ್ಮಲಾ ಅವರ ಸೌಜನ್ಯಕ್ಕೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *