ಸ್ವಂತ ಬುದ್ಧಿಯಂತೂ ಇಲ್ಲ, ಹೇಳಿದ್ದೂ ಕೇಳಲ್ಲ- ಕೈ ನಾಯಕರಿಗೆ ಹಿರಿಯರಿಂದ ಕ್ಲಾಸ್

ಬೆಂಗಳೂರು: ಕೇಂದ್ರದಲ್ಲಿ ಮೋದಿ ಸರ್ಕಾರ ಸಂಪುಟ ರಚನೆಯಲ್ಲಿ ಬ್ಯುಸಿಯಾಗಿದ್ರೆ ಇತ್ತ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉಳಿಸಿಕೊಳ್ಳೋದ್ರಲ್ಲಿ ಬ್ಯುಸಿಯಾಗಿವೆ. ಅದಕ್ಕಾಗಿ ನಿನ್ನೆ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಿತು.

ಸಭೆಯಲ್ಲಿ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ಮೋಟಮ್ಮ ಹಾಗೂ ಶಿವಶಂಕರಪ್ಪ ಫುಲ್ ಕ್ಲಾಸ್ ತಗೊಂಡಿದ್ದಾರೆ. ಎಲ್ಲವನ್ನೂ ಸಮಾಧಾನವಾಗಿ ಕೇಳಿದ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ಎಲ್ಲ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತರೋ ಭರವಸೆ ಕೊಟ್ಟಿದ್ದಾರೆ.

ಹಿರಿಯರು ಹೇಳಿದ್ದೇನು?:
ಸರ್ಕಾರ ಒಟ್ಟಾಗಿ ಮಾಡಿದ್ದೇವೆ ಅಂದ ಮಾತ್ರಕ್ಕೆ ಒಟ್ಟಾಗಿ ಚುನಾವಣೆಗೆ ಹೋಗೋ ಅಗತ್ಯ ಇತ್ತಾ? ನಿಮಗೆ ಸ್ವಂತ ಬುದ್ಧಿಯಂತೂ ಇಲ್ಲ. ಬೇರೆಯವರು ಹೇಳಿದ್ದನ್ನು ಕೇಳುವ ಸೌಜನ್ಯವೂ ಇಲ್ವಾ. ಪಕ್ಷದಲ್ಲಿ ಹಿರಿಯ ನಾಯಕರ ಮಾತಿಗೆ ಬೆಲೆಯಿಲ್ಲ, ಸೋತಮೇಲೂ ಸಲಹೆ ಕೇಳಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋತ ಮೇಲಾದ್ರೂ ನಮ್ಮ ಬಳಿ ಸಲಹೆ ಕೇಳಲು ಬಂದಿದ್ದೀರಾ, ಆಗಿದ್ದು ಆಗೋಗಿದೆ ಇನ್ನಾದ್ರೂ ಸಂಪುಟ ಪುನಾರಚನೆಗೆ ಕೈ ಹಾಕಿ ಹೊಸ ಸಮಸ್ಯೆ ಸೃಷ್ಟಿಸಬೇಡಿ ಎಂದು ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ಮೋಟಮ್ಮ ಹಾಗೂ ಶಿವಶಂಕರಪ್ಪ ಸಭೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಕ್ಕಿಂತ ಪಕ್ಷ ಮುಖ್ಯ. ಮುಂದಿನ ಯಾವುದೇ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳೋದು ಬೇಡ. ಪಕ್ಷದ ಶಕ್ತಿಯನ್ನ, ಕಾರ್ಯಕರ್ತರನ್ನು ಸಮರ್ಪಕವಾಗಿ ಬಳಸಿಕೊಂಡು ಚುನಾವಣೆ ಎದುರಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *