ಕಾವೇರಿ ಪ್ರವಾಹ ವೀಕ್ಷಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ತಂದೆ- ಕೊಚ್ಚಿ ಹೋದ ಮಗ

ಚೆನ್ನೈ: ಕಾವೇರಿ ನದಿಯ ಪ್ರವಾಹ ವೀಕ್ಷಣೆಗೆ ಬಂದು, ಸೆಲ್ಫಿ ಕ್ರೇಜ್‍ನಲ್ಲಿ ಮುಳುಗಿದ್ದ ತಂದೆಯ ಕೈತಪ್ಪಿ ಮಗ ನೀರಿನಲ್ಲಿ ಕೊಚ್ಚಿ ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಕರೂರ್‍ನ ನಿವಾಸಿ ಬಾಬು ಅವರ ಪುತ್ರ ಧನ್ವಂತ್ (4) ಮೃತಪಟ್ಟ ಬಾಲಕ. ಧನ್ವಂತ್ ತನ್ನ ತಂದೆ ಬಾಬು ಜೊತೆಗೆ ಭಾರೀ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದ್ದ ನದಿಯನ್ನು ವೀಕ್ಷಿಸಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

ನಡೆದದ್ದು ಏನು?
ಮಂಗಳವಾರ ಬೆಳಗ್ಗೆ ಧನ್ವಂತ್‍ನನ್ನು ಕರೆದುಕೊಂಡು ಬಾಬು ಕಾವೇರಿ ನದಿ ಪಾತ್ರದ ಪ್ರವಾಹವನ್ನು ವೀಕ್ಷಿಸಲು ವಂಗಲ್ ಮತ್ತು ಮೋಹನೂರ್ ಸೇತುವೆಗೆ ಹೋಗಿದ್ದರು. ಈ ವೇಳೆಯ ಸೇತುವೆಯ 24ನೇ ಕಂಬದ ಬಳಿ ನಿಂತ ಬಾಬು ಧನ್ವಂತ್‍ನನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಆಗ ಧನ್ವಂತ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಭಾರೀ ರಭಸವಾಗಿ ಹರಿಯುತ್ತಿದ್ದ ನೀರಿಗೆ ಬಾಲಕ ತೇಲಿಹೋಗಿದ್ದಾನೆ. ತಂದೆ ಎಷ್ಟೇ ಪ್ರಯತ್ನಿಸಿದರೂ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಘಟನಾ ಸ್ಥಳದಿಂದ ಓಡಿದ ಬಾಬು ಸಮೀಪದ ಪೊಲೀಸ್ ಠಾಣೆಗೆ ತೆರಳಿ, ನಡೆದ ಅವಘಡದ ಕುರಿತು ವಿವರಿಸಿದ್ದ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ 15 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಚರಣೆ ಮಾಡಿದರೂ ಧನ್ವಂತ್ ಪತ್ತೆಯಾಗಲಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *