ಕೆಲಸಕ್ಕೆ ಹೋಗಲ್ಲ ಅಂತ ತಂದೆ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ

crime

ಬೆಂಗಳೂರು: ಸ್ಕ್ರ್ಯಾಪ್ ಅಂಗಡಿಯ ಕೆಲಸಕ್ಕೆ ಬರಲಿಲ್ಲ ಎಂದು ತಂದೆ ನಿಂದಿಸಿದ್ದಕ್ಕೆ 23 ವರ್ಷದ ಯುವಕ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಸಾಹೀಲ್ ಎಂದು ಗುರುತಿಸಲಾಗಿದ್ದು, ಯುವಕನ ತಂದೆ ಅಬ್ಬಾಸ್ ತಮ್ಮ ಮಗ ಕೆಟ್ಟ ಹಾದಿಯನ್ನು ಹಿಡಿದಿದ್ದು, ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ಬೇಸತ್ತಿದ್ದರು. ಆಟೋ ರಿಕ್ಷಾ ಚಾಲಕನಾಗಿದ್ದ ಅಬ್ಬಾಸ್, ಭಾನುವಾರ ಕೆಲಸಕ್ಕೆ ಹೋಗದೇ ಟಿ.ವಿ ನೋಡಿಕೊಂಡು ಕುಳಿತಿದ್ದ ಸಾಹೀಲ್‍ಗೆ ನಿಂದಿಸಿ ಕೆಲಸಕ್ಕೆ ತೆರಳಿದ್ದಾರೆ. ಆದರೆ ಇದರಿಂದ ಮನನೊಂದ ಸಾಹೀಲ್ ಅಡುಗೆ ಮನೆಗೆ ಹೋಗಿ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡಿದ್ದಾನೆ. ಇದನ್ನೂ ಓದಿ: ಅಧಿಕಾರಕ್ಕಾಗಿ ಕಾಂಗ್ರೆಸ್‍ನಿಂದ ಮೇಕೆದಾಟು ಪಾದಯಾತ್ರೆ ನಾಟಕ: ಹಾಲಪ್ಪ ಆಚಾರ್

ಮೊದಲಿಗೆ ಚಾಕು ಹಿಡಿದು ಕೇವಲ ಬೆದರಿಸುತ್ತಿದ್ದಾನೆ ಎಂದು ಆತನ ತಾಯಿ ರೇಷ್ಮಾ ಅಂದುಕೊಂಡಿದ್ದರು ಮತ್ತು ಹೊಟ್ಟೆಯಲ್ಲಿ ಆಗಿರುವ ಗಾಯ ಸಣ್ಣದು ಎಂದು ಭಾವಿಸಿದ್ದರು. ಆದರೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸಾಹೀಲ್‍ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣ ಸಾಹೀಲ್ ಕರೆದೊಯ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಸಾಹೀಲ್ ಕೊನೆಯುಸಿರೆಳಿದಿದ್ದಾನೆ.

ಈ ಪ್ರಕರಣ ಕುರಿತಂತೆ ರೇಷ್ಮಾ ಅವರು, ಸಾಹೀಲ್ ಅಡುಗೆ ಕೋಣೆಗೆ ಹೋಗಿ ತನ್ನ ತಂದೆಯ ಮೇಲೆ ಕೂಗಾಡುತ್ತಾ ಕೋಪದಿಂದ ಚಾಕು ತೆಗೆದುಕೊಂಡು ಇರಿದುಕೊಂಡಿದ್ದಾನೆ. ನಂತರ ಚೂರಿಯನ್ನು ನೆಲದ ಮೇಲೆ ಎಸೆದು ಹಾಲ್‍ನಲ್ಲಿದ್ದ ಸೋಫಾದ ಮೇಲೆ ಕುಳಿತುಕೊಂಡಿದ್ದ. ಆದರೆ ಸಾಹೀಲ್ ನೋವಿನಿಂದ ಅಳಲು ಆರಂಭಿಸಿದಾಗಲೇ ರೇಷ್ಮಾಗೆ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂಬ ಅರಿವಾಗಿದೆ. ಸದ್ಯ ಈ ಸಂಬಂಧ ಜೆಜೆ ನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಅಂಟಿಸಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದ್ದೀರಾ, ನಿಮ್ಗೆ ಒಳ್ಳೆಯದಾಗಲ್ಲ: ಡಿಕೆಶಿ ಕಣ್ಣೀರು

Comments

Leave a Reply

Your email address will not be published. Required fields are marked *