ನಿಮ್ಮಪ್ಪ-ಅಮ್ಮ ಕರೀತಿದ್ದಾರೆಂದು ಹೇಳಿ ಶಾಲಾ ಬಾಲಕಿಯನ್ನ ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ ಕೊಂದ

ಹೈದರಾಬಾದ್: ಫ್ಯಾಕ್ಟರಿ ನೌಕರನೊಬ್ಬ 6 ವರ್ಷದ ಶಾಲಾ ಬಾಲಕಿಯನ್ನು ಅಪಹರಣ ಮಾಡಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ಮುಪ್ಪಿರೆಡ್ಡಿಪಾಳ್ಯದಲ್ಲಿ ಬುಧವರಾದಂದು ನಡೆದಿದೆ.

ಬಿಹಾರ ಮೂಲದ ಫ್ಯಾಕ್ಟರಿ ನೌಕರರೊಬ್ಬರ ಮಗಳಾದ ಖುಷ್ಬೂ ಕೊಲೆಯಾದ ಬಾಲಕಿ. ಈಕೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬಿಹಾರ ಹಾಗೂ ಇತರೆ ಸ್ಥಳಗಳಿಂದ ಬಂದ ಕಾರ್ಮಿಕರು ಈ ಗ್ರಾಮದಲ್ಲಿ ವಾಸವಿದ್ದು, ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ.

ಬಿಹಾರ ಮೂಲದವನೇ ಆದ ಫ್ಯಾಕ್ಟರಿ ನೌಕರ ರವಿ(25) ಈ ಕೃತ್ಯವೆಸಗಿದ್ದಾನೆ. ಬಾಲಕಿಯನ್ನ ಶಾಲೆಯಿಂದ ಹೊರಗೆ ಕರೆದ ರವಿ, ನಿನ್ನ ತಂದೆ ತಾಯಿ ಕರೆದುಕೊಂಡು ಬರಲು ಹೇಳಿದ್ದಾರೆಂದು ತಿಳಿಸಿ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.

ಬಾಲಕಿಯ ಪೋಷಕರು ದೂರು ದಾಖಲಿಸಿದ ಬಳಿಕ ಪೊಲೀಸರು ಶೋಧ ಕಾರ್ಯ ನಡೆಸಿ ಮದ್ಯದ ಅಮಲಿನಲ್ಲಿದ್ದ ರವಿಯನ್ನು ಬಂಧಿಸಿದ್ದಾರೆ. ಖುಷ್ಬುಳನ್ನು ರವಿ ಕರೆದುಕೊಂಡು ಹೋಗುತ್ತಿದ್ದುದನ್ನು ನೋಡಿದ್ದ ಮತ್ತೊಬ್ಬ ಬಾಲಕಿ ರವಿಯನ್ನು ಗುರುತಿಸಿದ್ದಾಳೆ. ಬಾಲಕಿಯನ್ನು ಅತ್ಯಾಚಾರವೆಸಗಿ ಕೊಂದಿದ್ದಾಗಿ ವಿಚಾರಣೆ ವೇಳೆ ರವಿ ಒಪ್ಪಿಕೊಂಡಿದ್ದಾನೆ. ಆದ್ರೆ ಆತ ಇನ್ನೂ ಮದ್ಯದ ಅಮಲಿನಲ್ಲಿದ್ದ ಕಾರಣ ಕೃತ್ಯವೆಸಗಿದ ನಿರ್ದಿಷ್ಟ ಸ್ಥಳವನ್ನ ಗುರಿತಿಸಲು ಅಸಾಧ್ಯನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕುಡಿಯುವ ನೀರಿನ ಯೋಜನೆಯಾದ ಮಿಷನ್ ಭಾಗೀರಥ ಗಾಗಿ ಹಾಕಲಾಗಿರೋ ಪೈಪ್‍ನೊಳಗೆ ಈತ ಬಾಲಕಿಯ ಶವವನ್ನ ಹೂತಿದ್ದಾನೆ. ಮೃತದೇಹವನ್ನ ಪತ್ತೆ ಮಾಡಲು ಕೃತ್ಯ ನಡೆದ ಸ್ಥಳದಲ್ಲಿ ಹುಡುಕಲಾಗ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *