ಬಟ್ಟೆ ಒಗೆಯುತ್ತಿದ್ದ ಮಹಿಳೆ, ಬಾಲಕನಿಗೆ ಡಿಕ್ಕಿ ಹೊಡೆದು ಕೆರೆಗೆ ನುಗ್ಗಿದ ಶಾಲಾ ವ್ಯಾನ್

ಮಂಡ್ಯ: ಚಾಲಕನ ಅಜಾಗರುಕತೆಯಿಂದ ಶಾಲಾ ವ್ಯಾನ್‍ವೊಂದು ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆ ಮತ್ತು ಬಾಲಕನಿಗೆ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಗೌಡಗೆರೆ ಬಳಿ ನಡೆದಿದೆ.

ಜ್ಞಾನಧಾರ ಎಂಬ ಖಾಸಗಿ ಶಾಲೆಗೆ ಸೇರಿದ ವ್ಯಾನ್ ಇದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಗ್ರಾಮಕ್ಕೆ ಬರುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ಅಜಾಗರುಕತೆಯಿಂದ ಗೌಡಗೆರೆ ಸಮೀಪದಲ್ಲಿ ಕೆರೆಯ ಕಡೆಗೆ ನುಗ್ಗಿದೆ.

ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಹೊನ್ನಮ್ಮ ಮತ್ತು ದಿನೇಶ್ ಎಂಬುವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಈ ಅವಘಡ ಸಂಭವಿಸುವ ವೇಳೆಯಲ್ಲಿ ವ್ಯಾನ್‍ನಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದರಿಂದ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ.

Comments

Leave a Reply

Your email address will not be published. Required fields are marked *