ಹೈಕಮಾಂಡ್‍ನಿಂದ ಹಿಡಿದು ರಮೇಶ್ ಎಲ್ಲರಿಗೂ ಬೈಯ್ತಾನೆ: ಸತೀಶ್ ಜಾರಕಿಹೊಳಿ

– ನನಗಿಂತ ಹೆಚ್ಚು ಸ್ಪೀಡ್ ಇರೋದು ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಮಾಜಿ ಸಚಿವ, ಸಹೋದರ ರಮೇಶ್ ಜಾರಕಿಹೊಳಿ ಬೈಯೋದು ಹೊಸದೇನಲ್ಲ. ಕಾಂಗ್ರೆಸ್ ಹೈಕಮಾಂಡ್‍ನಿಂದ ಹಿಡಿದು ಎಲ್ಲರಿಗೂ ಆತ ಬೈಯುತ್ತಾನೆ. ಅವರು ನನಗೆ ಬೈದರೆ ಗ್ರ್ಯಾಂಟೆಡ್ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಯೂತ್ ಕಾಂಗ್ರೆಸ್ ಸಭೆಯ ಬಳಿಕ ಮಾತನಾಡಿದ ಅವರು, ನಮಗೆ ಪಕ್ಷ ಮುಖ್ಯ. ಪಕ್ಷದ ಜೊತೆಗೆ ಮತದಾರರು ಇರುತ್ತಾರೆಯೇ ಹೊರತು ನಾಯಕರೊಂದಿಗೆ ಇರುವುದಿಲ್ಲ. ಈ ಭಾಗದ ಶಾಸಕರು ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಕೂಡ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನನ್ನ ಜೊತೆಗೆ ಮಾತಾಡದಿದ್ದರೆ ಏನಂತೆ, ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡುವಲ್ಲಿ ನನಗಿಂತ ಹೆಚ್ಚು ಸ್ಪೀಡ್ ಇದ್ದಾರೆ. ಕೆಲವು ಕಾರಣಗಳಿಂದಾಗಿ ಇಂದು ಸಭೆಗೆ ಹಾಜರಾಗಿಲ್ಲ. ಅವರ ಪರವಾಗಿ ಮಗ ಸಭೆಗೆ ಬಂದಿದ್ದಾರೆ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಜೊತೆಗೆ ಮಾತನಾಡುತ್ತಿಲ್ಲವೆಂದು ಹೇಳಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುನಿಸು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಇಬ್ಬರ ನಡುವೆ ಯಾವುದೇ ಭಿನ್ನಮತ ಇಲ್ಲ. ಮೊದಲು ಹೇಗಿದ್ವಿ ಈಗಲೂ ಹಾಗೇ ಇದ್ದೇವೆ. ರಾಜಕೀಯವಾಗಿ ಸಂಘಟನೆ ವಿಚಾರ ಬಂದಾಗ ಮಾತ್ರ ರಮೇಶ್ ಜಾರಕಿಹೊಳಿ ನಾನು ಕೂಡುತ್ತೇವೆ. ಬೇರೆ ಬೇರೆ ವಿಚಾರ ಬಂದಾಗ ನಾವು ಜೊತೆಯಾಗಲ್ಲ ಎಂದರು.

Comments

Leave a Reply

Your email address will not be published. Required fields are marked *