ದೇಶದ ಆರ್ಥಿಕತೆಗೆ ನಷ್ಟ- ಉಪಕದನದ ಕುರಿತು ಸಂತೋಷ್ ಹೆಗ್ಡೆ ಗರಂ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ನಿರಸವಾಗಿಸಾಗಿದ್ದು, ಇದೇ ವೇಳೆ ಉಪಕದನದ ಕುರಿತು ಮಾಜಿ ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಾಜಿನಗರದಲ್ಲಿ ಮತದಾನದ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಅನಾವಶ್ಯಕವಾದ ಚುನಾವಣೆಯಾಗಿದ್ದು, ಇಂತಹ ಚುನಾವಣೆಗಳಿಂದ ದೇಶದ ಆರ್ಥಿಕ ಪರಿಸ್ಥಿತಿಗೆ ಮತ್ತಷ್ಟು ಧಕ್ಕೆಯಾಗುತ್ತದೆ. ಆದ್ದರಿಂದಲೇ ಜನರು ಮತದಾನ ಧಿಕ್ಕರಿಸುತ್ತಿದ್ದಾರೆ ಎನಿಸುತ್ತಿದೆ ಎಂದರು.

ಉಪಚುನಾವಣೆಯೂ ರಾಜಕೀಯ ಲಾಭದಿಂದ ನಡೆಯುತ್ತಿದ್ದು, ಇಂತಹ ಕ್ಷೇತ್ರಗಳಲ್ಲಿ ಗೆದ್ದ ವ್ಯಕ್ತಿಗೆ ಶಾಸಕರಾಗಿ ಮುಂದುವರಿಯವುದು ಇಷ್ಟವಿಲ್ಲದಿದ್ದರೆ ರಾಜೀನಾಮೆ ನೀಡುವುದು ಸೂಕ್ತ. ಅಂತಹ ಕ್ಷೇತ್ರಗಳಿಗೆ ಮುಂದಿನ 3 ವರ್ಷಗಳ ಕಾಲ ಪ್ರತಿನಿಧಿಗಳ ಅಗತ್ಯವಿಲ್ಲ ಎಂಬುವುದು ನನ್ನ ಅನಿಸಿಕೆ. ಇಂತಹ ಘಟನೆಗಳಿಗೆ ಮುಂದಿನ ದಿನಗಳಲ್ಲಿಯಾದರೂ ಅವಕಾಶ ನೀಡಬಾರದು. ಜನರಿಗೆ ತಮ್ಮದೇ ಆದ ಕೆಲಸ ಕಾರ್ಯಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಅವರು ಮತದಾನ ಮಾಡಲು ಮುಂದಾಗುವುದಿಲ್ಲ. ಸರ್ಕಾರಿ ನೌಕರರಿಗೆ ಮಾತ್ರ ಇಲ್ಲಿ ರಜೆ ನೀಡಲಾಗುತ್ತದೆ. ಆದರೆ ಕೂಲಿ ಕಾರ್ಮಿಕರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಅಲ್ಲದೇ ರಾಜಕೀಯ ಕಾರಣದಿಂದ ಶಾಸಕರು ರಾಜೀನಾಮೆ ನೀಡಿದರೆ ಮರುಚುನಾವಣೆ ಮಾಡದೆ ತೀರ್ಮಾನ ಮಾಡಲು ಆ ಕ್ಷೇತ್ರದ ಜನರ ಆಯ್ಕೆಗೆ ಬಿಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *