ನನ್ನಲ್ಲಿದ್ದ ನಿರ್ದೇಶಕನನ್ನು ಬಡಿದೆಬ್ಬಿಸಿದ್ದವರು ಉಪ್ಪಿ: ಸಂತೋಷ್ ಅನಂದ್‍ರಾಮ್

ಬೆಂಗಳೂರು: ನನ್ನಲ್ಲಿದ್ದ ನಿರ್ದೇಶಕನನ್ನು ಬಡಿದೆಬ್ಬಿಸಿದವರು ರಿಯಲ್ ಸ್ಟಾರ್ ಉಪೇಂದ್ರ ಅವರು ಎಂದು ನಿರ್ದೇಶಕ ಸಂತೋಷ್ ಅನಂದ್‍ರಾಮ್ ಅವರು ಹೇಳಿದ್ದಾರೆ.

ಇಂದು ನಿರ್ದೇಶಕರ ದಿನವಿದ್ದು, ಈ ದಿನದ ಸಲುವಾಗಿ ತನ್ನ ನೆಚ್ಚಿನ ನಿರ್ದೇಶಕನಿಗೆ ಶುಭಾಶಯಗಳನ್ನು ಕೋರಿದ್ದಾರೆ. ರಾಜಕುಮಾರನಂತಹ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಸಂತೋಷ್ ಅನಂದ್‍ರಾಮ್ ಅವರು, ಉಪೇಂದ್ರ ಅವರು ನನ್ನ ನೆಚ್ಚಿನ ನಿರ್ದೇಶಕ ಎಂದು ಟ್ವೀಟ್ ಮಾಡಿದ್ದಾರೆ.

ಈ ಸಲುವಾಗಿ ಉಪ್ಪಿಯವರ ಫೋಟೋವನ್ನು ಟ್ವೀಟ್ ಮಾಡಿರುವ ಸಂತೋಷ್ ಅನಂದ್‍ರಾಮ್, ನನ್ನಲ್ಲಿದ್ದ ನಿರ್ದೇಶಕನನ್ನು ಬಡಿದೆಬ್ಬಿಸಿದ ನಿರ್ದೇಶಕರ ನಿರ್ದೇಶಕನಿಗೆ ನಿರ್ದೇಶಕರ ದಿನದ ಶುಭಾಶಯಗಳು “ಉಪ್ಪಿಗಿಂತ ರುಚಿ ಬೇರೆ ಇಲ್ಲ, ಒಪ್ಪಿಕೊಂಡೋರು ದಡ್ಡರಲ್ಲ”, ಎಲ್ಲ ನನ್ನ ಕನ್ನಡದ ನಿರ್ದೇಶಕರಿಗೆ ನಿರ್ದೇಶಕ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ತನ್ನ ವಿಭಿನ್ನ ರೀತಿಯ ನಿರ್ದೇಶನದಿಂದ ಜನಮೆಚ್ಚುಗೆ ಪಾತ್ರರಾಗಿದ್ದ ಉಪೇಂದ್ರ ಅವರು, ಓಂ, ಉಪೇಂದ್ರ, ಎ ಸಿನಿಮಾಗಳಂತಹ ವಿಭಿನ್ನ ಸಿನಿಮಾ ಮಾಡಿ ಯುವ ನಿರ್ದೇಶಕರಿಗೆ ಸ್ಫೂರ್ತಿಯಾಗಿದ್ದರು. ಅವರು ಕೊನೆಯದಾಗಿ 2015ರಲ್ಲಿ ಉಪ್ಪಿ-2 ಸಿನಿಮಾ ನಿರ್ದೇಶನ ಮಾಡಿದ್ದರು. ಈಗ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಂತೋಷ್ ಅನಂದ್‍ರಾಮ್ ಕೂಡ ಉಪ್ಪಿ ನಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಈ ಟ್ವೀಟ್‍ಗೆ ಉಪ್ಪಿ ಕೂಡ ರೀಪ್ಲೇ ಮಾಡಿದ್ದಾರೆ.

ಸಂತೋಷ್ ಅನಂದ್‍ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಗಜಕೇಸರಿಯಂತಹ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ನಿರ್ದೇಶನ ರಾಜಕುಮಾರ ಮತ್ತು ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರಗಳು ಸೂಪರ್ ಹಿಟ್ ಆಗಿ ದಾಖಲೆ ಬರೆದಿವೆ.

ಈಗ ಸದ್ಯ ಸಂತೋಷ್ ಅನಂದ್‍ರಾಮ್ ಅವರು ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಸ್ವಲ್ಪ ಕೆಲಸ ಮಾತ್ರ ಬಾಕಿ ಇತ್ತು. ಆದರೆ ಕೊರೊನಾ ಲಾಕ್‍ಡೌನ್ ಇರುವುದರಿಂದ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಈ ಸಿನಿಮಾದಲ್ಲಿ ಅಪ್ಪು ಸಿನಿಮಾ ಬಳಿಕ ಪುನೀತ್ ಅವರು ಕಾಲೇಜು ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *