ಸಂಕ್ರಾಂತಿ ಎಫೆಕ್ಟ್ – ಹೆಚ್ಚಾಯ್ತು ತರಕಾರಿಗಳ ಬೆಲೆ

– ಪೆಟ್ರೋಲ್, ಡಿಸೇಲ್ ರೀತಿ ತರಕಾರಿ ದರ ಅಧಿಕ!

ಬೆಂಗಳೂರು: ಸಂಕ್ರಾಂತಿ ವರ್ಷದ ಮೊದಲ ಹಬ್ಬ. ಚೆನ್ನಾಗಿ ಆಚರಿಸಬೇಕು ಎಂಬ ಉತ್ಸಾಹಕ್ಕೆ ತರಕಾರಿ ಬೆಲೆಗಳು ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿವೆ.

ಬೆಂಗಳೂರಿನ ಹಾಪ್ ಕಾಮ್ಸ್ ಮಳಿಗೆಗಳ ಬಳಿ ವ್ಯಾಪಾರಿಗಳು ಖಾಲಿ ಖಾಲಿ ಹೊಡೆಯುತ್ತಿದ್ದಾರೆ. ಈರುಳ್ಳಿ ಬೆಲೆ ಇನ್ನೂ ಮೊದಲ ಬೆಲೆಗೆ ಬಂದಿಲ್ಲ. ಜೊತೆಗೆ ತರಕಾರಿಗಳ ಬೆಲೆ ಸ್ವಲ್ಪ ಸ್ವಲ್ಪ ಹೆಚ್ಚಾಗುತ್ತಲೇ ಇದೆ. ನುಗ್ಗೇಕಾಯಿ ಕೆಜಿಗೆ 230 ರೂಪಾಯಿ ಆಗಿದೆ. ಬಟಾಣಿ, ಗುಂಡು ಬದನೆ ಬೆಲೆ ಕಳೆದ ದಿನಕ್ಕಿಂತ 15 ರೂಪಾಯಿ ಜಾಸ್ತಿಯಾಗಿದೆ. ಕ್ಯಾರೆಟ್ 90 ರೂ. ಆಗಿದೆ.

ಹಬ್ಬದ ಹಿಂದಿನ ದಿನಕ್ಕಿಂತ ಸಂಕ್ರಾಂತಿಗೆ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿರುವುದು ಹಬ್ಬದ ಮೂಡ್‍ನಲ್ಲಿ ಬೇಜಾರು ತರಿಸಿದೆ. ಹಬ್ಬದ ಎಫೆಕ್ಟ್ ಗೆ ಗ್ರಾಹಕನ ಜೇಬು ತರಕಾರಿಗೆ ಖಾಲಿಯಾಗುವಂತಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಕಡಲೆಕಾಯಿ ಹಾಗೂ ಅವರೆಕಾಯಿ ಬೇಕೆ ಬೇಕು. ಅವರೆಕಾಯಿ ಕೆಜಿಗೆ 50-60 ರೂಪಾಯಿಯಾಗಿದ್ದರೆ, ಕಡಲೆಕಾಯಿ ಬೆಲೆ ಕೆಜಿಗೆ 90 ರೂಪಾಯಿಯಾಗಿದೆ. ಪ್ರತಿದಿನವೂ ಹಾಪ್ ಕಾಮ್ಸ್ ತರಕಾರಿ ದರ ಏರಿಕೆಯಾಗುತ್ತಲೇ ಇದೆ.

ಎಷ್ಟೇ ಬೆಲೆಯಾದರೂ ತರಕಾರಿ ಖರೀದಿಮಾಡಲೇಬೇಕು. ಖರೀದಿ ಮಾಡುತ್ತಿದ್ದೇವೆ. ಹಬ್ಬಕ್ಕಾದರೂ ದರ ಕಡಿಮೆಯಾದರೆ ಸಾಕು ಅನ್ನಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದರ ಏರಿಕೆಗೆ ಕಡಿವಾಣ ಹಾಕಿ ಜನರು ಕೊಂಡುಕೊಳ್ಳುವಂತೆ ಮಾಡಬೇಕು. ಇಲ್ಲವಾದರೆ ನಾವು ಇನ್ನೂ ಕಷ್ಟದ ದಿನಗಳನ್ನ ನೋಡಬೇಕಾಗುತ್ತೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.

ಯಾವುದಕ್ಕೆ ಎಷ್ಟು?
ಹುರಳಿಕಾಯಿ 58 ರೂ, ಕ್ಯಾರೆಟ್ 92 ರೂ. ಆಗಿದೆ. ಇನ್ನೂ ಬೀಟ್‍ರೋಟ್ ಕೆಜಿಗೆ 39 ರೂ. ಇದೆ. ನವಿಲು ಕೋಸು 30 ರೂ., ಬದನೆ ಕಾಯಿ 40 ರೂ., ಬಿಳಿ ಬದನೆ 67 ರೂ. ಆಗಿದೆ. ಟೊಮೊಟೋ ಕೆಜಿಗೆ 28 ರೂ. ಆಗಿದೆ. ಈರುಳ್ಳಿ- 65 ರೂ., ಕಡ್ಲೆಕಾಯಿ 90 ರೂ. ಆಗಿದೆ. ನುಗ್ಗೆಕಾಯಿ 230 ರೂ., ಬಟಾಣಿ ಕೆಜಿಗೆ 80 ರೂ. ಆಗಿದೆ.

Comments

Leave a Reply

Your email address will not be published. Required fields are marked *