ನಾಗಪೂಜೆಯಿಂದ ಸಂಗಣ್ಣ ಕರಡಿಗೆ ಸಿಕ್ತು ಲೋಕಸಮರಕ್ಕೆ ಟಿಕೆಟ್!

ಕೊಪ್ಪಳ: ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಶುಕ್ರವಾರ ಬಿಜೆಪಿ ಕೊನೆಯ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿತ್ತು. ಆದ್ರೆ ಇದಕ್ಕೆ ಸಂಗಣ್ಣ ಅವರ ಪತ್ನಿ ಸಲ್ಲಿಸಿದ್ದ ನಾಗಪೂಜೆಯೇ ಕಾರಣ ಎಂದು ಬೆಂಬಲಿಗರು ಮತ್ತು ಕುಟುಂಬದವರು ಹೇಳುತ್ತಿದ್ದಾರೆ.

ನಾಗದೇವತೆಗೂ ಲೋಕಸಭಾ ಟಿಕೆಟ್ ಗೂ ಏನು ಸಂಬಂಧ ಅಂತ ಪ್ರಶ್ನೆ ಹುಟ್ಟೋದು ಸಾಮಾನ್ಯ. ಅದಕ್ಕೆ ಉತ್ತರ ಇಲ್ಲಿದೆ, ಬಿಜೆಪಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡಿದರೂ ಕೊಪ್ಪಳದ ಅಭ್ಯರ್ಥಿಯ ಹೆಸರನ್ನು ತಡೆಹಿಡಿದಿತ್ತು. ಈ ಕುರಿತು ಸಂಗಣ್ಣರ ಪತ್ನಿಗೂ ಆತಂಕದ ಛಾಯೆ ಅವರಿಸಿತ್ತು. ಆದರಿಂದ ಟಿಕೆಟ್ ಘೋಷಣೆ ವಿಳಂಬ ಹಿನ್ನೆಲೆ ಸಂಗಣ್ಣ ಪತ್ನಿ ನಿಂಗಮ್ಮ ಟಿಕೆಟ್‍ಗಾಗಿ ನಾಗದೇವತೆ ಮೊರೆ ಹೋಗಿದ್ದರಂತೆ. ಆಗ ದೋಷ ನಿವಾರಣೆಯಾಗಿ ಟಿಕೆಟ್ ಸಿಗಲಿ ಎಂದು ಬೇಡಿಕೊಂಡಿದ್ದರಂತೆ. ಆದರಿಂದಲೇ ಸಂಗಣ್ಣ ಅವರಿಗೆ ಟಿಕೆಟ್ ಸಿಕ್ಕಿದೆ ಎಂದು ನಂಬಿ ಸಂಗಣ್ಣ ಅವರು ಕುಟುಂಬ ಸಮೇತ ಇಂದು ನಾಗದೇವತೆಗೆ ಪೂಜೆ ಸಲ್ಲಿಸಿದ್ದಾರೆ.

ಸ್ವಾಮೀಜಿಯೊಬ್ಬರು ಸಂಗಣ್ಣ ಪತ್ನಿ ಬಳಿ, ನಿಮ್ಮ ಪತಿಗೆ ನಾಗ ದೋಷವಿದೆ ನಿವಾರಣೆ ಮಾಡಿಸಿ ಆ ಮೇಲೆ ಟಿಕೆಟ್ ಸಿಗುತ್ತೆ ಅಂತ ಹೇಳಿದ್ದರು. ಆಗ ಸ್ವಾಮೀಜಿಯ ಮಾತು ಅನುಸರಿಸಿದ ಸಂಗಣ್ಣ ಪತ್ನಿ ನಿಂಗಮ್ಮ ಅವರು ಕಳೆದ ಎರಡು ದಿನದಿಂದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಬುಕ್ಕಸಾಗಾರ ಗ್ರಾಮದಲ್ಲಿ ಇರುವ ನಾಗದೇವತೆಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಒಂದು ವಾರದಿಂದ ತೆಲೆನೋವಾಗಿದ್ದ ಟಿಕೆಟ್ ವಿಚಾರ ಶುಕ್ರವಾರ ಅಧಿಕೃತವಾಗಿ ಬಗೆಹರಿದಿದೆ. ಇದಕ್ಕೆ ದೇವರ ಕೃಪೆ ಕಾರಣವೆಂದು ಸಂಗಣ್ಣ ಕುಟುಂಬಸ್ಥರು ನಂಬಿದ್ದಾರೆ.

Comments

Leave a Reply

Your email address will not be published. Required fields are marked *