ಸ್ಯಾಂಡಲ್‍ವುಡ್ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ ವಿಧಿವಶ

ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ದೇಶಕ, ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಎನ್. ಮೋಹನ್ ಕುಮಾರ್(56) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಎನ್.ಆರ್.ಕಾಲೋನಿಯ ರಾಮಲೀಲಾ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿದ್ದ ಮೋಹನ್ ಅವರು, ಸ್ನಾನದ ಕೋಣೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಸಮೀಪದ ರಂಗ ದೊರೈ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತ ಮೋಹನ್ ಕುಮಾರ್ ಅವರು ತಾಯಿ ಕಮಲಮ್ಮ, ಪತ್ನಿ ಹಾಗೂ ನಟಿ, ನಿರೂಪಕಿ ವತ್ಸಲಾ ಮೋಹನ್, ಪುತ್ರಿ ಮತ್ತು ನಟಿ ಅನನ್ಯಾ ಮೋಹನ್ ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

ರಂಗಭೂಮಿ ಹಿನ್ನೆಲೆಯಿಂದ ಬಂದು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜಾನಪದ ಕಾರ್ಯಕ್ರಮದಲ್ಲಿ ನಿರೂಪಕರಾಗುವ ಮೂಲಕ ಕಿರುತೆರೆ ಪ್ರವೇಶಿಸಿದರು. ಎಂಜಿನಿಯರ್ ಪದವಿಧರರಾಗಿದ್ದ ಕೆ.ಎನ್.ಮೋಹನ್ ರಂಗಭೂಮಿ, ಧಾರವಾಹಿ, ಪತ್ರಿಕೋದ್ಯಮ ಹೀಗೆ ಹಲವರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಮ್ಮ ಪತ್ನಿ ವತ್ಸಲಾ ಮೋಹನ್ ಅವರ ಸಜ್ಜಾದನಾ ಗಣೇಶ ಕಾದಂಬರಿ ಆಧರಿಸಿ 2016ರಲ್ಲಿ ಬೊಂಬೆಯಾಟ ಎಂಬ ಮಕ್ಕಳ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿತ್ತು. ಮೈಸೂರು ಮಲ್ಲಿಗೆ ಎಂಬ ಸಿನಿಮಾದಲ್ಲಿ ನಾಯಕನಿಗೆ ಕಂಠದಾನ ಮಾಡಿದ್ದರು. ಇದನ್ನೂ ಓದಿ: ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್‍ಗೆ ಪಿತೃ ವಿಯೋಗ

ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕೂ ಮುನ್ನ ಜಯನಗರದ 3ನೇ ಬ್ಲಾಕ್ ಪೂರ್ವ 8ನೇ ಮುಖ್ಯರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 9ರಿಂದ 10ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Comments

Leave a Reply

Your email address will not be published. Required fields are marked *