ತುಳು ನಟನ ಜೊತೆ ಯಜ್ಞ ಶೆಟ್ಟಿ ಕಲ್ಯಾಣ

ಮಂಗಳೂರು: ಬಹುಭಾಷಾ ನಟಿ ಯಜ್ಞಶೆಟ್ಟಿ ಅವರು ಇಂದು ತುಳು ಸಿನಿರಂಗದ ನಾಯಕ ನಟ ಸಂದೀಪ್ ಶೆಟ್ಟಿ ಅವರೊಂದಿಗೆ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕುಟುಂಬ ಸದಸ್ಯರು ಸೇರಿದಂತೆ ಕಲೆ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಂದು ಮಂಗಳೂರಿನಲ್ಲಿ ಮದುವೆ ನಡೆದಿದ್ದು, ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗೆ ಶುಭಕೋರಿದ್ದಾರೆ.

ಯಜ್ಞ ಶೆಟ್ಟಿ ಅವರು 2007ರಲ್ಲಿ ತೆರೆಕಂಡ ‘ಒಂದು ಪ್ರೀತಿಯ ಕಥೆ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ಆ ಬಳಿಕ ‘ಎದ್ದೇಳು ಮಂಜುನಾಥ’, ‘ಲವ್ ಗುರು’, ‘ಉಳಿದವರು ಕಂಡಂತೆ’, ‘ಕಿಲ್ಲಿಂಗ್ ವೀರಪ್ಪನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದೊಂದಿಗೆ ತೆಲುಗು ಸಿನಿರಂಗಕ್ಕೂ ಪಾದಾರ್ಪಣೆ ಮಾಡಿದ್ದ ಯಜ್ಞಶೆಟ್ಟಿ ಅವರು, ‘ಲಕ್ಷ್ಮಿ’ಸ್ ಎನ್‍ಟಿಆರ್’ ಸಿನಿಮಾ ನಟನೆಗೆ ಭಾರೀ ಪ್ರಶಂಸೆಗಳನ್ನು ಪಡೆದಿದ್ದರು.

ಕಿರುತೆಯಲ್ಲೂ ಮೋಡಿ ಮಾಡಿದ್ದ ಯಜ್ಞಶೆಟ್ಟಿ ಅವರು, ಸುದೀಪ್ ನಿರ್ಮಾಣದ ‘ವಾರಸ್ಥಾರ’ ಧಾರವಾಹಿಯಲ್ಲಿ ನಟಿಸಿದ್ದರು. ಉಳಿದಂತೆ ಸಂದೀಪ್ ಶೆಟ್ಟಿ ಅವರು ತುಳು ‘ಥಾಂಡಾ ಮದಿಮೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *