ಇದು ಅಂತ್ಯವಲ್ಲ. ಅಕ್ರಮ ವಿರುದ್ಧ ಹೋರಾಟದ ಆರಂಭ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ

ಉಡುಪಿ: ಇದು ಅಂತ್ಯ ಅಲ್ಲ.., ಮರಳುಗಾರಿಕೆ ವಿರುದ್ಧದ ಹೊರಾಟದ ಆರಂಭ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳುವ ಮೂಲಕ ಮರಳು ಕಳ್ಳರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಜಿಲ್ಲಾಧಿಕಾರಿಗಳು ಮಾತನಾಡಿ, ಅಕ್ರಮದ ವಿರುದ್ಧದ ಹೋರಾಟದ ಆರಂಭ ಮಾಡಿದ್ದೇವೆ. ಪೊಲೀಸ್ ಇಲಾಖೆಯ ಜೊತೆಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಸ್ಕ್ವಾಡ್ ರಚನೆ ಮಾಡಲಾಗುವುದು. ಸ್ಕ್ವಾಡ್ ಮೂಲಕ ಜಿಲ್ಲೆಯ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲೆಲ್ಲಾ ದಾಳಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ- ಎಸಿಯ ಮೇಲೆ ಇಂತಹ ಅಮಾನವೀಯ ಘಟನೆ ಉಡುಪಿಯಂತಹ ಜಿಲ್ಲೆಯಲ್ಲಿ ನಡೆದದ್ದು ವಿಷಾದನೀಯ. ಇದರ ಹಿಂದೆ ಮರಳು ಮಾಫಿಯಾದ ಕೈವಾಡ ಇರಬಹುದು. ಪೊಲೀಸರ ತನಿಖೆಯಲ್ಲಿ ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದರು. ನಿನ್ನೆ ರಾತ್ರಿ ಕಂಡ್ಲೂರಿನ ಭಯಾನಕ ವಾತಾವರಣ ನನ್ನನ್ನು ಕೆಲಕಾಲ ಕಂಗೆಡುವಂತೆ ಮಾಡಿತು ಎಂದು ತಡರಾತ್ರಿಯ ಭಯಾನಕ ಸನ್ನಿವೇಶವನ್ನು ನೆನಪಿಸಿಕೊಂಡರು.

ಸ್ಥಳೀಯ ಪೊಲೀಸ್ ಠಾಣೆಗಳಿಗೆ, ತಹಶೀಲ್ದಾರ್, ಎಸಿ ಕಚೇರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ ದಾಳಿ ಮಾಡಿದ ಎಲ್ಲಾ ಪ್ರಕರಣಗಳು ಫೇಲ್ ಆಗಿತ್ತು. ಹೀಗಾಗಿ ಈ ಬಾರಿ ಗೌಪ್ಯವಾಗಿ ದಾಳಿ ನಡೆಸಿದ್ದೇವೆ ಎಂದರು.

ಕುಂದಾಪುರದ ತನಕ ಸುಮಾರು 20 ಬೈಕ್‍ಗಳಲ್ಲಿ ನಮ್ಮನ್ನು ಹಿಂಭಾಲಿಸಿಕೊಂಡು ದುಷ್ಕರ್ಮಿಗಳು ಬಂದರು. ಅವರಿಂದ ತಪ್ಪಿಸಿಕೊಂಡು ಉಡುಪಿಯ ತನಕ ಬಂದಿದ್ದೇವೆ. ಈ ಘಟನೆ ದುರಾದೃಷ್ಟಕರ ಎಂದರು. ಉಡುಪಿ ಜಿಲ್ಲೆಯ ಸಚಿವ ಪ್ರಮೋದ್ ಮಧ್ವರಾಜ್, ಜನಪ್ರತಿನಿಧಿಗಳು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿಯಿಂದ ಬೆಂಬಲ ಸಿಕ್ಕಿದೆ. ಸಾರ್ವಜನಿಕರಿಂದ ಕೂಡಾ ಬೆಂಬಲ ಸಿಕ್ಕಿದೆ. ಜಿಲ್ಲೆಯ ಜನ ಕಾನೂನಿನ ಹೋರಾಟದ ಜೊತೆ ಇದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಹೇಳಿದರು.

https://www.youtube.com/watch?v=NKGXeOVp68g

 

Comments

Leave a Reply

Your email address will not be published. Required fields are marked *