ಅಕ್ರಮ ಮರಳುಗಾರಿಕೆಗೆ ಎಸ್.ಪಿ, ಡಿ.ಸಿಗಳೇ ಹೊಣೆ: ಸಚಿವ ಸಿಸಿ ಪಾಟೀಲ್

ರಾಯಚೂರು: ರಾಜ್ಯದಲ್ಲಿ ಮರಳಿನ ಸಮಸ್ಯೆ ಕಾಡುತ್ತಿದೆ. ಎಲ್ಲರಿಗೂ ಮರಳು ಸಿಗುವಂತೆ ಮರಳು ನೀತಿ ಜಾರಿಗೆ ತರಲಾಗುವುದು ಅಂತ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.

ರಾಯಚೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ವೇಳೆ ಮಾತನಾಡಿದ ಸಿಸಿ ಪಾಟೀಲ್, ಗಣಿ ಇಲಾಖೆಗೆ ಮರಳಿನ ಸಮಸ್ಯೆ ಕಾಡುತ್ತಿದೆ. ಅಕ್ರಮ ಮರಳುಗಾರಿಕೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಯತ್ನಿಸುತ್ತಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಕ್ರಮ ತಡೆಗೆ ವಿಶೇಷ ತಂಡ ರಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಮರಳುಗಾರಿಕೆ ಬಗ್ಗೆ ಅಧ್ಯಯನಕ್ಕೆ ಅಧಿಕಾರಿಗಳ ತಂಡವನ್ನ ತೆಲಂಗಾಣಕ್ಕೆ ಕಳುಹಿಸಲಾಗುವುದು ಎಂದರು.

ಮಾನ್ವಿಯಲ್ಲಿ ಮರಳು ಲಾರಿ ತಡೆಯಲು ಹೋದ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಸಾವು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಜಿಲ್ಲಾಧಿಕಾರಿಯಿಂದ ಹೆಚ್ಚಿನ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇನೆ. ಹಟ್ಟಿ ಚಿನ್ನದ ಗಣಿ ಹಾಗು ರಾಯಚೂರಿನಲ್ಲಿನ ಮರಳುಗಾರಿಕೆ ಬಗ್ಗೆ ಪ್ರವಾಸ ಮಾಡಲಿದ್ದೇನೆ ಅಂತ ತಿಳಿಸಿದರು.

ಇನ್ನೂ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಮುಖ್ಯಮಂತ್ರಿಗಳು ಹಾಗು ಕೋರ್ ಕಮಿಟಿ ನಿರ್ಧಾರ ಕೈಗೊಳ್ಳುತ್ತೆ. ಸಂಪುಟ ವಿಸ್ತರಣೆ ಬಗ್ಗೆ ನಾನು ಮಾತನಾಡುವುದಿಲ್ಲ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಅಂತ ಕೈ ಮುಗಿದರು.

Comments

Leave a Reply

Your email address will not be published. Required fields are marked *