ತ್ಯಾಜ್ಯ ವಿಲೇವಾರಿಗೆ ಸುವ್ಯವಸ್ಥಿತ ಯಂತ್ರ ಸಂಶೋಧಿಸಿದ ಮಂಗಳೂರಿನ ಈ ಪಬ್ಲಿಕ್ ಹೀರೋ

ಮಂಗಳೂರು: ದೇಶದ ಅತೀ ದೊಡ್ಡ ಸಮಸ್ಯೆಯಾಗಿ ಕಾಡ್ತಿರೋದು ತ್ಯಾಜ್ಯವಿಲೇವಾರಿ. ಅದಕ್ಕಾಗಿಯೇ ಸ್ವಚ್ಛ ಭಾರತದಂತಹ ಅಭಿಯಾನ ನಡೀತಿದೆ. ಇದನ್ನ ಸೂಕ್ಷ್ಮವಾಗಿ ಗಮನಿಸಿರೋ ಮಂಗಳೂರಿನ ಈ ನಮ್ಮ ಪಬ್ಲಿಕ್ ಹೀರೋ ಬ್ರಿಲಿಯಂಟ್ ಐಡಿಯಾ ಮಾಡಿದ್ದಾರೆ.

ಮಂಗಳೂರಿನ ಸುರತ್ಕಲ್ ಸಮೀಪದ ಮಂಗಳಪೇಟೆ ನಿವಾಸಿ ಸನತ್ ರಾಜ್ ಭಂಡಾರಿ ಸದ್ಯ ಮೂಡಬಿದ್ರೆಯ ಎಸ್‍ಎನ್‍ಎಂಪಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.

ಸನತ್ ತ್ಯಾಜ್ಯ ವಿಲೇವಾರಿಯ ವಿಶೇಷ ಯಂತ್ರವೊಂದನ್ನು ಕಂಡು ಹಿಡಿದಿದ್ದಾರೆ. ಈ ಯಂತ್ರದಲ್ಲಿ ಮಾಮೂಲಿ ತ್ಯಾಜ್ಯ ಹಾಗೂ ಪಾಸ್ಟಿಕ್ ತ್ಯಾಜ್ಯ ಪ್ರತ್ಯೇಕವಾಗುತ್ತದೆ. ತ್ಯಾಜ್ಯ ಸಂಗ್ರಹಿಸುವಾಗ ಧೂಳು ಹಾರದಂತೆ ನೀರು ಚಿಮುಕಿಸುವ ವ್ಯವಸ್ಥೆ, ಕಳೆ ಕೀಳಲು ಗ್ರಾಸ್‍ಕಟ್ಟರ್ ಇದೆ. ನಿಂತಲ್ಲೇ ಇದು ಹೇಗೆ ಬೇಕಾದರೂ ತಿರುಗಬಲ್ಲದಾಗಿದ್ದು, ಎಲ್ಲಾ ರೀತಿಯ ರಸ್ತೆಯಲ್ಲಿ ಸಂಚರಿಸುತ್ತದೆ.

ಮಾನವ ರಹಿತ, ಸೋಲಾರ್ ಚಾಲಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾಡಬೇಕೆಂದು ನಿರ್ಧರಿಸಿ ಸುಮಾರು ಒಂದು ವರ್ಷದಿಂದ ಪ್ಲಾಸ್ಟಿಕ್ ಡಿಸ್ಪೋಸಲ್ ಮೆಷಿನ್ ಆಂಡ್ ಮಲ್ಟಿ ಟೂಲ್ಸ್ ಅನ್ನುವ ಹೊಸ ತ್ಯಾಜ್ಯ ವಿಲೇವಾರಿ ಯಂತ್ರದ ವಿನ್ಯಾಸವನ್ನು ಸಂಶೋಧಿಸಿದ್ದಾರೆ.

ಇದೀಗ ಮಾದರಿಯಾಗಿದ್ದ ಪೂರ್ಣ ಪ್ರಮಾಣದ ವಾಹನ ನಿರ್ಮಾಣಕ್ಕೆ ಒಂದೂವರೆ ಲಕ್ಷ ಖರ್ಚಾಗಲಿದೆ ಅಂತ ಸನತ್ ಹೇಳ್ತಿದ್ದಾರೆ. ಅಂದಹಾಗೆ ಸನತ್ ಯೋಜನೆಗೆ ರಾಜ್ಯ ಸರ್ಕಾರ ಅಭಯಹಸ್ತ ಚಾಚಿದ್ರೆ ಸನತ್ ಕನಸು ನನಸಾಗುತ್ತೆ. ಜೊತೆಗೆ ಕಸ ವಿಲೇವಾರಿಗೆ ಸ್ವದೇಶಿ ತಂತ್ರಜ್ಞಾನವೇ ಸಿಕ್ಕಂತಾಗಲಿದೆ.

https://www.youtube.com/watch?v=MazUOMLO1qQ

Comments

Leave a Reply

Your email address will not be published. Required fields are marked *