ನಾಡಹಬ್ಬದಲ್ಲೂ ಬಿಜೆಪಿ ಭಿನ್ನಮತ ಸ್ಫೋಟ – ಸಚಿವ ಸ್ಥಾನ ವಂಚಿತ ರಾಮದಾಸ್ ಕಾರ್ಯಕ್ರಮಕ್ಕೆ ಗೈರು

– ಸರಿ ಹೋಗುತ್ತೆ ಎಂದ ಸೋಮಣ್ಣ

ಮೈಸೂರು: ನಾಡಹಬ್ಬ ದಸರಾದಲ್ಲೂ ಬಿಜೆಪಿಯ ಭಿನ್ನಮತ ಸ್ಫೋಟಗೊಂಡಿದ್ದು, ಸಚಿವ ಸ್ಥಾನ ವಂಚಿತ ಶಾಸಕ ಎಸ್.ಎ.ರಾಮದಾಸ್ ಎಲ್ಲ ಕಾರ್ಯಕ್ರಮಗಳಿಗೂ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಜಂಬೂ ಸವಾರಿಯಲ್ಲಿ ಭಾಗಿಯಾಗುವ ಮೊದಲ ಆರು ಆನೆಗಳ ತಂಡಕ್ಕೆ ಜಿಲ್ಲಾ ಉಸ್ತುವಾರಿ, ಸಚಿವ ವಿ.ಸೋಮಣ್ಣ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು. ಆನೆಗಳು ಒಂದೂವರೆ ತಿಂಗಳು ಅರಮನೆಯಲ್ಲಿಯೇ ಉಳಿದುಕೊಳ್ಳಲಿವೆ. ದಕ್ಷಿಣ ಭಾರತದಲ್ಲಿ ಹೈ ಅಲರ್ಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಆನೆಗಳ ಪೂಜೆಗೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಗಜಪಡೆಯ ಸುತ್ತಲಿನ ಕಲಾ ತಂಡ ಹಾಗೂ ವಸ್ತುಗಳ ಪರಿಶೀಲನೆ ನಡೆಸಲಾಯ್ತು.

ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ವಿ.ಸೋಮಣ್ಣ, ಇನ್ನೆರಡು ದಿನ ಮೈಸೂರಿನಲ್ಲಿ ಉಳಿಯಲಿದ್ದೇನೆ. ಗಜಪಡೆ ಸ್ವಾಗತಕ್ಕೆ ಅವರನ್ನು ಆಹ್ವಾನಿಸಲು ಬೆಳಗ್ಗೆಯಿಂದ ದೂರವಾಣಿ ಮಾಡುತ್ತಿದ್ದೇನೆ. ಆದ್ರೆ ರಾಮದಾಸ್ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. 28ರಂದು ಖುದ್ದಾಗಿ ರಾಮದಾಸ್ ಅವರನ್ನ ಭೇಟಿಯಾಗಿ ಮನವೊಲಿಸುತ್ತೇನೆ. ವರ್ಷಕ್ಕೊಮ್ಮೆ ಬರುವ ನಾಡಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕು. ನನಗೆ ಖಾತೆ ಹಂಚಿಕೆ ಬಗ್ಗೆ ಕಾಳಜಿಯೂ ಇಲ್ಲ ಆಸಕ್ತಿಯು ಇಲ್ಲ. ನನಗೆ ಖಾತೆ ಹಂಚಿಕೆ ಬಗ್ಗೆ ಕಾಳಜಿಯೂ ಇಲ್ಲ ಆಸಕ್ತಿಯೂ ಇಲ್ಲ ಎಂದರು.

ಇಂದು ಮಧ್ಯಾಹ್ನ 12.30ರ ಅಭಿಜಿನ್ ಲಗ್ನದಲ್ಲಿ ಚಾಮುಂಡೇಶ್ವರಿ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರು ಗಜಪಡೆಗೆ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿದರು. ಗಜಪಡೆ ಸ್ವಾಗತದಲ್ಲಿ ಡಿಸಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

https://www.youtube.com/watch?v=LwXO4sOBHTs

 

Comments

Leave a Reply

Your email address will not be published. Required fields are marked *