ಗೊಗೊಯ್ ದೇಶದ ನಿರೀಕ್ಷೆ ಹುಸಿಗೊಳಿಸಿದ್ರು: ಎಸ್.ಆರ್.ಹಿರೇಮಠ

ಧಾರವಾಡ: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನಮ್ಮ ದೇಶದೊಳಗಿದ್ದ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ, ರಂಜನ್ ಗೊಗೊಯ್ ರಾಜ್ಯಸಭೆಗೆ ಆಯ್ಕೆಯಾದ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು. ರಂಜನ್ ಗೊಗೊಯ್ ನವೆಂಬರ್ ನಲ್ಲಿ ನಿವೃತ್ತಿಯಾಗಿದ್ದಾರೆ, ಕೆಲವೇ ತಿಂಗಳಲ್ಲಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈ ಹಿಂದೆಯೂ ಕೆಲವರು ಇದೇ ರೀತಿ ನಿವೃತ್ತಿ ನಂತರ ಲಾಭ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ಕೆಲವೇ ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದರು.

ನಿವೃತ್ತಿ ಜೀವನದ ನಂತರ ಲಾಭ ಪಡೆಯಲು ನ್ಯಾಯಾಧೀಶರು ಮಾಡಬಾರದ ಕೆಲಸವನ್ನು ಮಾಡ್ತಾರೆ ಎಂದು ಜನರು ಹೇಳುತ್ತಾರೆ. ಮಾನ, ಮರ್ಯಾದೆ, ನಾಚಿಕೆ ಇದ್ರೆ ನಿವೃತ್ತಿ ಜೀವನದ ಲಾಭ ಪಡೆಯಲು ಮುಂದಾಗಬಾರದು. ನಿವೃತ್ತಿ ಬಳಿಕ ಮನೆಯಲ್ಲಿರಬೇಕು. ದೇಶದ ಜನತೆಗಿದ್ದ ಎಲ್ಲ ನಿರೀಕ್ಷೆಗಳನ್ನು ರಂಜನ್ ಗೊಗೊಯ್ ಹುಸಿಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಕರೆ ನೀಡಿರುವುದನ್ನು ಸ್ವಾಗತಿಸಿದರು. ಮೋದಿ ಒಳ್ಳೆಯದು ಹೇಳಿದ್ದು, ನಾವು ಅದನ್ನು ಒಪ್ಪಿಕೊಳ್ಳಬೇಕು. ಕೊರೊನಾವನ್ನು ಚೀನಾದವರು ಮೊದಲು ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಅದರ ಗಂಭೀರತೆ ಗೊತ್ತಾದಾಗ ಎಲ್ಲ ಸಂಪರ್ಕ ಬಂದ್ ಮಾಡಿದರು. ಕೊರೊನಾ ವೈರಸ್‍ಗೆ ಸದ್ಯ ಮದ್ದು ಇಲ್ಲ. ಕೊರೊನಾ ಬಗ್ಗೆ ನಮ್ಮ ದೇಶದಲ್ಲಿ ಮಾಡುತ್ತಿರುವ ಕ್ರಮಗಳು ಒಳ್ಳೆಯದು. ಎಷ್ಟು ಮುಂಜಾಗ್ರತೆ ತೆಗೆದುಕೊಳ್ಳುತ್ತೆವೆಯೋ ಅಷ್ಟು ಒಳ್ಳೆಯದು ಎಂದರು.

Comments

Leave a Reply

Your email address will not be published. Required fields are marked *