ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ರವಿ ಚನ್ನಣ್ಣನವರ್

ಬೆಂಗಳೂರು: ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರದ ನೂತನ ಎಸ್.ಪಿ ರವಿ.ಡಿ.ಚನ್ನಣ್ಣನವರ್ ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ರವಿ ಚನ್ನಣ್ಣನವರ್ ಭಾಗಿಯಾಗಿದ್ದರು. ಈ ವೇಳೆ, ಬೆಂಗಳೂರು ರಾಜಧಾನಿ ಜೊತೆಯಲ್ಲೇ ಬೆಳೆಯುತ್ತಿರುವ ನೆಲಮಂಗಲ ಪೊಲೀಸ್ ಉಪವಿಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ತಿಳಿಸಿದರು. ಅಲ್ಲದೆ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರು ಪೊಲೀಸ್ ವ್ಯವಸ್ಥೆಯೊಂದಿಗೆ ಸ್ಪಂದಿಸಿದಾಗ ಸಮಾಜಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡಲು ಅನುಕೂಲವಾಗುತ್ತದೆ ಎಂದು ರವಿ ಚನ್ನಣ್ಣನವರ್ ಹೇಳಿದರು. ಹಾಗೆಯೇ ನೆಲಮಂಗಲ ಉಪವಿಭಾಗದ ಆರು ಠಾಣೆಗಳ ವ್ಯಾಪ್ತಿಗೆ ಬರುವ ಹಲವಾರು ನಾಗರಿಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಕುಂದು ಕೊರತೆಗಳನ್ನು ವಿವರಿಸಿದರು. ಅದನ್ನು ಆಲಿಸಿದ ಎಸ್.ಪಿ, ಪೊಲೀಸರಿಗೆ ಸವಾಲಗಿರುವ ಗಾಂಜಾ, ಟ್ರಾಫಿಕ್, ಅಕ್ರಮ ಮದ್ಯ, ರೌಡಿ ಚಟುವಟಿಕೆಗಳಿಗೆ ಕಾನೂನು ಪ್ರಕಾರ ಪಾಠ ಹೇಳಲಿದ್ದೇವೆ ಎಂದು ಜನರಿಗೆ ಭರವಸೆ ಕೊಟ್ಟರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೌಡಿಗಳು ಅಪರಾಧ ಚಟುವಟಿಕೆಗಳಿಗೆ ಉತ್ತೇಜನ ನೀಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಜೊತೆಗೆ ಗ್ರಾಮಾಂತರ ಪ್ರದೇಶದ ವಾಹನ ಸವಾರರಿಗೆ ಕೂಡ ಎಚ್ಚರಿಕೆ ನೀಡಿದರು. ಡ್ರಿಂಕ್ ಆಂಡ್ ಡ್ರೈವ್, ರ್‍ಯಾಷ್ ಆಂಡ್ ನೆಗ್ಲಿಜಿಯಂಟ್ ಮತ್ತು ವ್ಹೀಲಿಂಗ್ ಮಾಡಿಕೊಂಡು ವಾಹನ ಓಡಿಸಿದರೆ ವಾಹನ ಮುಟ್ಟುಗೋಲು ಜೊತೆಗೆ ವಾಹನ ಪರವಾನಿಗೆ ರದ್ದು ಮಾಡಲಾಗುತ್ತೆ ಎಂದು ಜನಸಂಪರ್ಕ ಸಭೆಯಲ್ಲಿ ರವಿ ಚೆನ್ನಣ್ಣನವರ್ ವಾರ್ನಿಂಗ್ ನೀಡಿದರು.

Comments

Leave a Reply

Your email address will not be published. Required fields are marked *