ಖಾರ್ಕಿವ್‌ನಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯರ ರಕ್ಷಣೆ – ಎಂಇಎ

ನವದೆಹಲಿ: ಉಕ್ರೇನ್‌ನ 2 ನಗರಗಳಲ್ಲಿ ರಷ್ಯಾ 6 ಗಂಟೆಗಳ ಕದನ ವಿರಾಮ ಘೋಷಿಸಿದ ಬಳಿಕ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಇದೀಗ ಖಾರ್ಕಿವ್ ನಗರದಲ್ಲಿ ಯಾವುದೇ ಭಾರತೀಯರು ಸಿಲುಕಿಕೊಂಡಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ(ಎಂಇಎ) ದೃಢಪಡಿಸಿದೆ.

ಉಕ್ರೇನ್‌ನ ಪ್ರಮುಖ ನಗರಗಳಾದ ಖಾರ್ಕಿವ್‌ನಿಂದ ಎಲ್ಲಾ ಭಾರತೀಯರನ್ನು ರಕ್ಷಿಸಲಾಗಿದೆ. ಆದರೆ ಸುಮಿಯಲ್ಲಿ ಇನ್ನೂ 600ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವಲ್ಲಿ ನಾವು ಹೆಚ್ಚಿನ ಗಮನ ಹರಿಸುತ್ತಿದ್ದೇವೆ ಎಂದು ಎಂಇಎ ತಿಳಿಸಿದೆ. ಇದನ್ನೂ ಓದಿ: ರಾಯಭಾರ ಕಚೇರಿಯವರು ಕರೆದಾಗ ತಾಯಿಯೇ ಮಕ್ಕಳನ್ನು ಕರೆದಂತಹ ಅನುಭವ ಆಯ್ತು: ವಿದ್ಯಾರ್ಥಿನಿ ರುಬಿನಾ

ಉಕ್ರೇನ್‌ನಲ್ಲಿ ಇನ್ನೂ ಎಷ್ಟು ಭಾರತೀಯರು ಸಿಲುಕಿದ್ದಾರೆ ಎಂಬುದನ್ನು ಸರ್ಕಾರ ನೋಡುತ್ತಿದೆ. ಇಂದು ಪಿಸೊಚಿನ್‌ಗೆ ಬಂದಿರುವ ಎಲ್ಲಾ ಭಾರತೀಯರನ್ನು ತವರಿಗೆ ಕರೆಸಿಕೊಳ್ಳುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಸದ್ಯ ಪಿಸೊಚಿನ್‌ನಲ್ಲಿ 298 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಇಂದು ಈ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ಪುರ್ಣಗೊಳ್ಳುವ ಭರವಸೆ ಇದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ

ಕಳೆದ 24 ಗಂಟೆಗಳಲ್ಲಿ 5 ವಿಮಾನಗಳು ಭಾರತ ತಲುಪಿದ್ದು, ಸುಮಾರು 2,900 ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲಾಗಿದೆ. ಇದುವರೆಗೆ ಸುಮಾರು 13,300 ಜನರು ಭಾರತಕ್ಕೆ ಮರಳಿದ್ದಾರೆ. ಮುಂದಿನ 24 ಗಂಟೆಗಳಿಗೆ 13 ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Comments

Leave a Reply

Your email address will not be published. Required fields are marked *