ಚುನಾವಣೆ ಗೆಲ್ಲಲು ಸಿದ್ದು ಸರ್ಕಾರದ ವಿರುದ್ಧ `ರಾಮ’ ಅಸ್ತ್ರ!

ನವದೆಹಲಿ: ಕರ್ನಾಟಕ ವಿಧಾನಸಭೆಯ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ರಾಮ ರಥ ಸಂಚರಿಸಲಿದೆ. ಈ ಮೂಲಕ ಚುನಾವಣೆ ಗೆಲ್ಲಲು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್‍ಎಸ್) ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಮ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ.

ಉತ್ತರಪ್ರದೇಶದಿಂದ ಕರ್ನಾಟಕಕ್ಕೆ ರಾಮರಾಜ್ಯ ರಥಯಾತ್ರೆ ಬರಲಿದ್ದು, 6 ರಾಜ್ಯಗಳಲ್ಲಿ ರಥ ಸಂಚರಿಸಲಿದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ನಡೆಯಲಿರುವ ಈ ಯಾತ್ರೆ ಉತ್ತರಪ್ರದೇಶದ ಲಕ್ನೋದಿಂದ ಫೆಬ್ರವರಿ 13ರಿಂದ ಹೊರಡಲಿದ್ದು, ಫೆಬ್ರವರಿ 25ಕ್ಕೆ ತಮಿಳುನಾಡಿನ ರಾಮೇಶ್ವರದಲ್ಲಿ ಕೊನೆಗೊಳ್ಳಲಿದೆ.

ಫೆಬ್ರವರಿ 13 ರಿಂದ ಆರಂಭವಾಗುವ ಯಾತ್ರೆ 39 ದಿನಗಳ ಕಾಲ ನಡೆಯಲಿದೆ. ಈ ವೇಳೆ ಸುಮಾರು 40 ಸಾರ್ವಜನಿಕ ಸಭೆಗಳು ಆಯೋಜನೆ ಮಾಡಲಾಗುತ್ತಿದೆ. ಈ ಸಭೆಗಳಲ್ಲಿ ಪ್ರಮುಖವಾಗಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚೆ ನಡೆಯಲಿದೆ. ಈ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆ ಸೇರಿದಂತೆ, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ರಾಮಮಂದಿರ ವಿಚಾರವನ್ನೇ ಪ್ರಮುಖ ಆಸ್ತ್ರವಾಗಿ ಬಿಜೆಪಿ ಬಳಕೆ ಮಾಡುವ ಸಾಧ್ಯತೆಗಳಿವೆ.

ಯಾತ್ರೆಗೆ ಉತ್ತರಪ್ರದೇಶದ ಕರಸೇವಾಕಪುರ ದಿಂದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದಿಂದ ಆರಂಭವಾಗುವ ಯಾತ್ರೆ ಮಧ್ಯಪ್ರದೇಶ, ಮಹಾರಾಷ್ಟ್ರ ಮೂಲಕ ಕರ್ನಾಟಕ್ಕೆ ಪ್ರವೇಶ ಪಡೆಯಲಿದ್ದು, ನಂತರ ಕೇರಳಕ್ಕೆ ಸಾಗಿ ತಮಿಳುನಾಡಿನ ರಾಮೇಶ್ವರದಲ್ಲಿ ಅಂತ್ಯಗೊಳ್ಳಲಿದೆ.

1990ರ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ರಾಮ ರಥ ಯಾತ್ರೆ ನಡೆಸಿದ್ದರು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಯನ್ನು ಪ್ರಮುಖ ರಾಜಕೀಯ ಪಕ್ಷವಾಗಿ ಬೆಳೆಯುವಂತೆ ಮಾಡಿದ್ದರು.

Comments

Leave a Reply

Your email address will not be published. Required fields are marked *