ಕಾರವಾರ: ಹೊನ್ನಾವರದ ಪರೇಶ್ ಮೇಸ್ತಾ ಸಾವು ಇನ್ನೂ ನಿಗೂಢವಾಗಿರುವ ನಡುವೆಯೇ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೇಸ್ತಾ ಕುಟುಂಬಕ್ಕೆ 5 ಲಕ್ಷ ರೂ. ಮಂಜೂರು ಮಾಡಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಯವರ ಜಂಟಿ ಕಾರ್ಯದರ್ಶಿ ಪಿ.ಎ.ಗೋಪಾಲ್ ಪತ್ರ ಬರೆದು ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 7ರಂದು ಹೊನ್ನಾವರದಲ್ಲಿ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆ ವೇಳೆ ಪರೇಶ್ ಮೇಸ್ತಾ ಕಾಣೆಯಾಗಿ ನಂತರ ಪಟ್ಟಣದ ಶಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಈತನ ಸಾವು ಸಹಜ ಸಾವಲ್ಲ, ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿತ್ತು. ಈ ಸಂಬಂಧ ಜಿಲ್ಲೆಯಾದ್ಯಾಂತ ಪ್ರತಿಭಟನೆ ನೆಡೆದು ಗಲಭೆ ಕೂಡ ನಡೆದು ನೂರಾರು ಜನರ ಬಂಧನ ಸಹ ಮಾಡಲಾಗಿತ್ತು.
ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಮೇಸ್ತಾ ಮನೆಗೆ ತೆರಳಿ 1 ಲಕ್ಷ ರೂ. ಹಣ ನೀಡಿದ್ದು, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದರು. ಆದರೇ ಮರುದಿನ ಈ ಹಣವನ್ನು ಸಚಿವರಿಗೆ ಮರಳಿಸಿ ಸರ್ಕಾರಿ ಉದ್ಯೋಗವೂ ಬೇಡ ಎಂದಿದ್ದರು. ಸರ್ಕಾರದಿಂದ ಪರಿಹಾರ ನೀಡಬೇಕೆಂದು ಬಿಜೆಪಿ ಪಟ್ಟು ಹಿಡಿದು ಪ್ರತಿಭಟನೆ ನೆಡೆಸಿತ್ತು . ಈ ಹಿನ್ನಲೆಯಲ್ಲಿ ಡಿಸೆಂಬರ್ 12ರಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಹಣ ಮಂಜೂರು ಮಾಡಲಾಗಿದೆ.

ಈ ಬಗ್ಗೆ ಪಬ್ಲಿಕ್ ಟಿ.ವಿ ದೂರವಾಣಿ ಮೂಲಕ ಕುಟುಂಬವನ್ನು ಸಂಪರ್ಕಿಸಿದ್ದು ಸರ್ಕಾರದಿಂದ ಪರಿಹಾರ ಹಣ ಸ್ವೀಕರಿಸುವ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನ ಮಾಡಿಲ್ಲ. ನಮ್ಮ ಸಮಾಜದವರ ಜೊತೆಗೆ ಮಾತುಕತೆ ನೆಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ. ಆದರೆ ಈವರೆಗೂ ನಮ್ಮನ್ನು ಸಂಪರ್ಕಿಸಿಲ್ಲ. ಮರಣೋತ್ತರ ಪರಿಕ್ಷೆಯ ವರದಿ ಕೂಡ ತಡವಾಗುತ್ತಿದೆ. ಇದಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.
https://www.youtube.com/watch?v=5XVX-SyTRAI
https://www.youtube.com/watch?v=FusuDEDmVe0

Leave a Reply