ಲಾಂಗ್‍ನಿಂದ ಕೊಚ್ಚಿ ರೌಡಿಶೀಟರ್‌ನ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ನಾಲ್ಕೈದು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಾನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಾನಕುಂಟೆ ಗ್ರಾಮದ ಸಂತೋಷ್ ಕುಮಾರ್ (25) ಕೊಲೆಯಾದ ರೌಡಿಶೀಟರ್. ರಾಜಾನಕುಂಟೆ ಮಾದಾಪುರ ರಸ್ತೆಯಲ್ಲಿ ಸಂತೋಷ್ ಕುಮಾರ್ ಮೇಲೆ ನಾಲ್ಕೈದು ಮಂದಿ ಹಲ್ಲೆ ಮಾಡಿ ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಸಂತೋಷ್ ಕುಮಾರ್ ಸ್ನೇಹಿತನ ಕೈಬೆರಳು ಸಹ ಕಟ್ ಆಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಹಳೆ ವೈಷಮ್ಯವೇ ಕಾರಣ ಎಂದು ಹೇಳಲಾಗಿದೆ.

ಅಂದಹಾಗೆ ಮೃತ ಸಂತೋಷ್ ಕುಮಾರ್ ಈ ಹಿಂದೆ ತನ್ನ ಸ್ನೇಹಿತನಾದ ರೌಡಿಶೀಟರ್ ಹರಿಕೆರೆ ವೇಣು ಮೇಲೆ ಹಲ್ಲೆ ಮಾಡಿದ್ದನು. ಈ ಪ್ರಕರಣದಲ್ಲಿ ಹಲ್ಲೆಗೊಳಗಾದ ವೇಣು ಆಸ್ಪತ್ರೆಗೆ ದಾಖಲಾಗಿ ಬದುಕುಳಿದಿದ್ದ. ಇತ್ತ ಹಲ್ಲೆ ಮಾಡಿದ ಸಂತೋಷ್ ಕುಮಾರ್ ಜೈಲುವಾಸ ಅನುಭವಿಸಿ ಹೊರಗಡೆ ಬಂದಿದ್ದನು. ಹೀಗಾಗಿ ರೌಡಿಶೀಟರ್ ವೇಣು ತನ್ನ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯವನ್ನು ಮಾಡಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಜನಕುಂಟೆ ಪೊಲೀಸರು ಕೊಲೆ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಮತ್ತೊಂದೆಡೆ ಮೃತನ ಸಂಬಂಧಿಕರು ಇದು ರೌಡಿಶೀಟರ್ ವೇಣು ಹಾಗೂ ಆತನ ತಂದೆ ಸೇರಿ ಸಂತೋಷ್ ನನ್ನ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *